ಹೊಸಪೇಟೆ (ವಿಜಯನಗರ): ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ವಿದ್ಯಾರ್ಥಿಗಳು ಶನಿವಾರ ಹಂಪಿಯಲ್ಲಿ ಪಾರಂಪರಿಕೆ ನಡಿಗೆ ನಡೆದರು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಪುರಾತತ್ವ ಅಧಿಕಾರಿ ಆರ್. ಮಂಜ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, `ಮುಂದಿನ ಪೀಳಿಗೆಗಾಗಿ ನಮ್ಮ ಐತಿಹಾಸಿಕ ಕುರುಹು, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ’ ಎಂದು ಹೇಳಿದರು.
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಭಾರತದ 28 ಸ್ಮಾರಕಗಳಿರುವುದು ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ವಿಶೇಷವಾಗಿ ಹಂಪಿ ಸ್ಮಾರಕಗಳ ಗುಂಪು 1986ರಲ್ಲಿ ಮತ್ತು 1987ರಲ್ಲಿ ಪಟ್ಟದಕಲ್ಲು ಸ್ಮಾರಕಗಳ ಗುಂಪು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ಈ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಾಚಾರ್ಯ ಎಸ್.ಎಂ. ಶಶಿಧರ ಮಾತನಾಡಿ, ಹಂಪಿ ಸ್ಮಾರಕಗಳನ್ನು ಎಷ್ಟು ಬಾರಿ ನೋಡಿದರೂ ನಮಗೆ ಹೊಸ ಹೊಸ ವಿಷಯಗಳು ತಿಳಿಯುತ್ತವೆ. ಇಂಥ ಕಾರ್ಯಕ್ರಮಗಳ ಮೂಲಕ ನಮ್ಮ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಿಎಸ್ಸಿ ವಿಭಾಗದ ಮುಖ್ಯಸ್ಥೆ ಪಾರ್ವತಿ ಕಡ್ಲಿ, ಸಂಚಾಲಕಿ ವಸಂತಮ್ಮ, ಸಹ ಪ್ರಾಧ್ಯಾಪಕರಾದ ವಿಜಯಕುಮಾರ್ ಎ. ವಿ., ಮಂಜುಳಾ ಎಸ್. ಡಿ., ಶಾಹೀದ ಬೇಗಂ, ಮಾನಸ, ಸಿದ್ದಲಿಂಗೇಶ್ವರ, ಉದಯಶಂಕರ್, ಬಿ. ಈರಣ್ಣ, ಹನುಮಂತಪ್ಪ, ಶ್ರೀಹರಿ ಇದ್ದರು.
ಪಾರಂಪರಿಕ ನಡಿಗೆ ಸಂದರ್ಭದಲ್ಲಿ ಹಂಪಿಯ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಜಯ ವಿಠಲ ದೇವಸ್ಥಾನ, ಪುರಂದರ ದಾಸರ ಮಂಟಪ, ಸೀತೆ ಸೆರಗು, ಅಚ್ಯುತ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ಯಂತ್ರೋದ್ಧಾರಕ, ವಿರೂಪಾಕ್ಷ ಬಜಾರ್, ವಿರೂಪಾಕ್ಷ ದೇವಾಲಯ, ಹೇಮಕೂಟ ದೇವಾಲಯಗಳು, ಕಡ್ಲೆಕಾಳು ಗಣಪತಿ, ಸಾಸಿವೆ ಕಾಳು ಗಣಪತಿ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಲಕ್ಷ್ಮೀನರಸಿಂಹ, ಕಮಲ ಮಹಲ್, ಗಜ ಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ಹೀಗೆ ಸುಮಾರು 15 ಕಿ.ಮೀ ದೂರ ನಡೆದು ಸ್ಮಾರಕಗಳ ಮಹತ್ವವನ್ನು ತಿಳಿದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.