ನೂತನವಾಗಿ ಆರಂಭವಾಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜತೆಗೆ ಇದ್ದರು.
ಹೊಸಪೇಟೆ (ವಿಜಯನಗರ): ಜನಸಾಮಾನ್ಯರ ರಕ್ಷಣೆಗೆ ಇರುವ ಪ್ರಮುಖ ವ್ಯವಸ್ಥೆ ಎಂದರೆ ನ್ಯಾಯಾಲಯ, ಅದನ್ನು ವ್ಯವಸ್ಥಿತವಾಗಿ ಇಡುವ ಹೊಣೆಗಾರಿಗೆ ಸ್ಥಳೀಯರಿಗೆ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.
ಇಲ್ಲಿ ಶನಿವಾರ ನೂತನವಾಗಿ ಆರಂಭವಾಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಎರಡು, ಮೂರು ವರ್ಷದೊಳಗೆ ನೂತನ ನ್ಯಾಯಾಲಯ ಸಂಕೀರ್ಣ ಇಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸರ್ಕಾರ ಇದಕ್ಕೆ ತ್ವರಿತವಾಗಿ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಗುವಾಹಟಿ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಹೊಸಪೇಟೆಯಲ್ಲಿ ತಾವು ವಕೀಲಿ ವೃತ್ತಿ ಮಾಡಿದ್ದನ್ನು ನೆನಪು ಮಾಡಿದರು. ಕಿರಿಯ ವಕೀಲರ ಪ್ರಗತಿಗೆ ಹಿರಿಯ ವಕೀಲರು ಸಹಕಾರ ನೀಡಬೇಕು ಎಂದರು.
ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಜಿ.ಶಾಂತಿ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಜೆ.ಎಂ.ಅನಿಲ್ ಕುಮಾರ್, ಕೆ.ಕೋಟೇಶ್ವರ ರಾವ್, ವಿಜಯನಗರದ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ಸಂಸದ ಇ.ತುಕಾರಾಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್ ಇತರರು ಇದ್ದರು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ನ್ಯಾಯಾಲಯದ ಉದ್ಘಾಟನೆ ವೇಳೆ ನ್ಯಾಯಮೂರ್ತಿ ನಟರಾಜ್ ಜತೆಗೆ ಇದ್ದರು. ಗಾದಿಗನೂರು ಸಿಲಿಂಡರ್ ಸ್ಫೋಟ ಸ್ಥಳಕ್ಕೆ ಸಚಿವರು ಬಳಿಕ ತೆರಳಿದ ಕಾರಣ ವೇದಿಕೆ ಕಾರ್ಯಕ್ರಮಕ್ಕೆ ಗೈರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.