ADVERTISEMENT

ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಶೀಘ್ರ: ಶಾಸಕ ಗವಿಯಪ್ಪ ಮಾಹಿತಿ

ಕೌಶಲ ಅಭಿವೃದ್ಧಿ ಸಂಸ್ಥೆ ಸ್ಥಾಪನೆ: ಶಾಸಕ ಗವಿಯಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:19 IST
Last Updated 20 ಫೆಬ್ರುವರಿ 2026, 2:19 IST
ಹೊಸಪೇಟೆಯಲ್ಲಿ ಗುರುವಾರ ಹಾಸ್ಟೆಲ್ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ವಿದ್ಯಾರ್ಥಿಗಳ ಜತೆಗೆ ಶಿಲಾನ್ಯಾಸ ನೆರವೇರಿಸಿದರು
ಹೊಸಪೇಟೆಯಲ್ಲಿ ಗುರುವಾರ ಹಾಸ್ಟೆಲ್ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ವಿದ್ಯಾರ್ಥಿಗಳ ಜತೆಗೆ ಶಿಲಾನ್ಯಾಸ ನೆರವೇರಿಸಿದರು   

ಹೊಸಪೇಟೆ (ವಿಜಯನಗರ): ‘ಪ್ರವಾಸಿ ತಾಣವಾಗಿರುವ ಹೊಸಪೇಟೆಯಲ್ಲಿ ಮುಂದಿನ 10ರಿಂದ 15 ವರ್ಷಗಳಲ್ಲಿ 15 ಸಾವಿರದಿಂದ 20 ಸಾವಿರದಷ್ಟು ಹೋಟೆಲ್‌ ಕೊಠಡಿಗಳು ನಿರ್ಮಾಣವಾಗಲಿವೆ, ಇಲ್ಲಿ ಉದ್ಯೋಗ ಅವಕಾಶ ಹೇರಳ ಇರಲಿದೆ, ಹೀಗಾಗಿ ನಗರದಲ್ಲಿ ಶೀಘ್ರದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಆರಂಭಿಸಲಾಗುವುದು’ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ಅವರು ಗುರುವಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಜಂಬುನಾಥ ರಸ್ತೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯ ಆವರಣದಲ್ಲಿ ₹6.33 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಬ್ಬಂದಿ ವಸತಿಗೃಹ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ಉದ್ಯೋಗ ಅವಕಾಶ ಇದೆ. ಅನುಭವಿ ಅಡುಗೆಯವರಿಗೆ (ಷೆಫ್‌) ತಿಂಗಳಿಗೆ ₹5 ಲಕ್ಷದಿಂದ ₹6 ಲಕ್ಷ ಸಂಬಳ ಇದೆ. ಕನಿಷ್ಠವೆಂದರೂ ₹90 ಸಾವಿರ ವೇತನ ಇದೆ. ಈಶಾನ್ಯ ಭಾರತ, ಒಡಿಶಾ ಮೊದಲಾದ ಕಡೆಯಿಂದ ಬರುವ ಯುವಕ–ಯುವತಿಯರು ಇಲ್ಲಿನ ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದಾರೆ. ನಮ್ಮವರು ಸಹ ಇಲ್ಲೇ ಉದ್ಯೋಗ ಪಡೆಯುವ ಅವಕಾಶ ಸಾಕಷ್ಟು ಇದ್ದು, ಅದಕ್ಕೆ ಅವಕಾಶ ಮಾಡಿಕೊಡಲು ಗಂಭೀರ ಪ್ರಯತ್ನ ನಡೆಯಲಿದೆ’ ಎಂದರು.

ADVERTISEMENT

‘ನಗರದಲ್ಲಿ ಕೌಶಲ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ ಮೊಬೈಲ್ ರಿಪೇರಿ, ಎಐ ತಂತ್ರಜ್ಞಾನ ಬಳಕೆಯಂತಹ ಹಲವು ಉದ್ಯೋಗ ಆಧಾರಿತ ಕೋರ್ಸ್ ಕಲಿಸಲು ಸಹ ಯೋಜನೆ ರೂಪಿಸಲಾಗಿದೆ’ ಎಂದು ಶಾಸಕರು ತಿಳಿಸಿದರು.

9 ಹಾಸ್ಟೆಲ್ ನಿರ್ಮಾಣ: ‘ಕಳೆದ 3 ವರ್ಷಗಳಲ್ಲಿ 9 ಹಾಸ್ಟೆಲ್‌ಗಳ ನಿರ್ಮಾಣವಾಗಿವೆ. ಹೊಸ ಶಾಲೆಗಳೂ ಸ್ಥಾಪನೆಯಾಗುತ್ತಿವೆ. ನಗರದ ವ್ಯಾಪ್ತಿಯಲ್ಲಿ ಇಂದು 70 ಶಾಲೆಗಳಿವೆ. ನಗರದಲ್ಲಿ ₹15 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಶಾಲೆ ನಿರ್ಮಾಣವಾಗಲಿದ್ದು, ಈಗಾಗಲೇ ₹5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆಯ ಜಿಲ್ಲಾ ಅಧಿಕಾರಿ ಜವೇದ್ ಕರಂಗಿ, ಪ್ರಾಂಶುಪಾಲ ಪರಶುರಾಮ ಇದ್ದರು.

‘ವಸತಿಗೃಹ ಬೇಕು’

‘ನೂತನ ಜಿಲ್ಲೆಯಾದ ಬಳಿಕ 67 ಇಲಾಖೆಗಳು ಜಿಲ್ಲಾ ಕೇಂದ್ರ ಹೊಸಪೇಟೆಗೆ ಬರಬೇಕಿದೆ. ಆದರೆ ವಸತಿ ಕಚೇರಿ ಕಟ್ಟಡ ಇಲ್ಲದ ಕಾರಣ ಇನ್ನೂ ಕೆಲವು ಇಲಾಖೆಗಳು ಬಳ್ಳಾರಿಯಿಂದ ಇಲ್ಲಿಗೆ ಸ್ಥಳಾಂತರಗೊಂಡಿಲ್ಲ. ಸದ್ಯ 7ರಿಂದ 8 ಸಾವಿರ ಸಿಬ್ಬಂದಿಗೆ ವಸತಿ ವ್ಯವಸ್ಥೆ ಆಗಬೇಕಿದೆ. ವರ್ಷಕ್ಕೆ 500ರಂತೆ ಕ್ವಾರ್ಟರ್ಸ್ ನಿರ್ಮಿಸಿದರೆ 10 ವರ್ಷದಲ್ಲಿ ಈ ವಸತಿ ಸೌಲಭ್ಯದ ಕೊರತೆ ನಿವಾರಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ಶಾಸಕ ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.