
ಕೊಟ್ಟೂರು: ಸಾರ್ವಜನಿಕರಿಂದ ಯಾವುದೇ ದೂರು ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ಕಾರ್ಯವೈಖರಿ ಮೆಚ್ಚತಕ್ಕದ್ದು ಎಂದು ಶಾಸಕ ಕೆ.ನೇಮರಾಜ್ ನಾಯ್ಕ ಹೇಳಿದರು.
ಪಟ್ಟಣದ ಜೆಸ್ಕಾಂ ಇಲಾಖೆಯ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯ ಮತ್ತು ಪಾಲನ ಉಪ ವಿಭಾಗೀಯ ಕಛೇರಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಗರಿಬೊಮ್ಮನಹಳ್ಳಿ ಕ್ಷೇತ್ರ ಬಹುತೇಕ ಕೃಷಿ ಅವಲಂಬಿತ ಕ್ಷೇತ್ರವಾಗಿರುವುದರಿಂದ ರೈತರನ್ನು ಜೆಸ್ಕಾಂ ಕಛೇರಿಗೆ ಅಲೆದಾಡಿಸದಂತೆ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಹಂತ ಹಂತವಾಗಿ ತಾಲ್ಲೂಕು ಮಟ್ಟದ ಕಛೇರಿಗಳ ಆರಂಭಕ್ಕೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು. ಹಾಗೂ ಜೀವದ ಹಂಗು ತೊರೆದು ವಿದ್ಯುತ್ ಸರಬರಾಜಿನಲ್ಲಿ ತೊಡಗಿರುವ ನೌಕರರಿಗೆ ಸುರಕ್ಷತಾ ಉಪಕರಣಗಳನ್ನು ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಧೀಕ್ಷಕ ಅಭಿಯಂತರ ತೇಜಾನಾಯ್ಕ ಮಾತನಾಡಿ, ಕೊಟ್ಟೂರು ತಾಲ್ಲೂಕಿನಲ್ಲಿ ಕುಸುಮ್.ಸಿ ಯೋಜನೆ ಜಾರಿಯಾದರೇ ರೈತರ ಪಂಪ್ ಸೆಟ್ ಗಳಿಗೆ 7 ತಾಸು ಕರೆಂಟ್ ನೀಡಬಹುದು ಹಾಗೂ ಕೂಡ್ಲಿಗಿಗೆ ಸ್ಧಳಾಂತರಗೊಂಡಿರುವ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಕೊಟ್ಟೂರಿಗೆ ತರಲು ಶಾಸಕರು ಪ್ರಯತ್ನಅತ್ಯಗತ್ಯ ಎಂದರು.
ಚಾನುಕೋಟಿ ಮಠಾಧೀಶ ಸಿದ್ಧಲಿಂಗ ಶಿವಾಚಾರ್ಯರು, ಮುಖಂಡ ಎಂ.ಎಂ.ಜೆ ಹರ್ಷವರ್ಧನ್, ಕಾರ್ಯನಿರ್ವಾಹಕ ಅಭಿಯಂತರ ಸತೀಶ್, ಎಇಇ ನಾಗರಾಜ್, ಎಇ ಚೇತನ್ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘ, ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.