ADVERTISEMENT

ಒಂಬತ್ತು ಭರವಸೆಗಳ ಕೆಆರ್‌ಎಸ್‌ಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 10:21 IST
Last Updated 15 ಮಾರ್ಚ್ 2023, 10:21 IST
   

ಹೊಸಪೇಟೆ (ವಿಜಯನಗರ): ಒಂಬತ್ತು ಭರವಸೆಗಳನ್ನು ಒಳಗೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌ಪಿ) ಪ್ರಣಾಳಿಕೆಯನ್ನು ನಗರದಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.

ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌ ದೊಡ್ಡಮನಿ, ವಿಜಯನಗರ ಜಿಲ್ಲಾ ಅಧ್ಯಕ್ಷ ಹಾವನೂರು ಕೋಟೆಪ್ಪ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಚಿ. ನಜೀರ್‌, ಹೂವಿನಹಡಗಲಿ ತಾಲ್ಲೂಕು ಘಟಕದ ಅಧ್ಯಕ್ಷ ಅಕ್ಕಿ ಮಂಜುನಾಥ ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಚಂದ್ರಶೇಖರ್‌ ದೊಡ್ಡಮನಿ, ಒಂಬತ್ತು ಸೂತ್ರಗಳನ್ನು ಒಳಗೊಂಡ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿದೆ. ಪಕ್ಷವು ಈ ಅಂಶಗಳನ್ನು ಆಧರಿಸಿ ಮತದಾರರಲ್ಲಿ ಮತ ಯಾಚಿಸಲಿದೆ. ಒಂಬತ್ತು ಅಂಶಗಳಲ್ಲಿ ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ, ಆರೋಗ್ಯ ಸೇವೆ, ಶಿಕ್ಷಣ, ಕೃಷಿ ಕ್ಷೇತ್ರದ ಬಲವರ್ಧನೆ, ಮಹಿಳೆ ಮತ್ತು ಕುಟುಂಬ ಕಲ್ಯಾಣ, ಯುವಜನತೆ ಮತ್ತು ಉದ್ಯೋಗ, ಪ್ರಾದೇಶಿಕ–ಕನ್ನಡ ಕಲೆ– ಸಾಹಿತ್ಯ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ, ಉದ್ದಿಮೆ ಮತ್ತು ಸಂಘಟಿತ/ಅಸಂಘಟಿತ ಕಾರ್ಮಿಕರ ಕಲ್ಯಾಣ ಸೇರಿದೆ ಎಂದರು.

ADVERTISEMENT

ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷವು ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ರಾಜ್ಯದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಭ್ರಷ್ಟಾಚಾರದಲ್ಲಿ ಮುಳುಗಿವೆ. ಈ ಪಕ್ಷಗಳು ಇರುವವರೆಗೆ ಈ ರಾಜ್ಯದಲ್ಲಿ ಭ್ರಷ್ಟಾಚಾರ ಇರುತ್ತದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಬದಲಾವಣೆ ತರಲಾಗುವುದು. ಪಕ್ಷ ಅಧಿಕಾರಕ್ಕೆ ಬಂದರೆ ಒಂದು ವರ್ಷದಲ್ಲಿ ಪ್ರಣಾಳಿಕೆಯಲ್ಲಿರುವ ವಿಷಯಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಡತನ ನಿವಾರಣೆಗೆ ಸಂಪೂರ್ಣ ಮದ್ಯ ನಿಷೇಧಿಸಲಾಗುವುದು. ಲೋಕಾಯುಕ್ತ ಬಲಪಡಿಸಲು ಮತ್ತಷ್ಟು ಪರಿಣಾಮಕಾರಿ ಕ್ರಮ ಜರುಗಿಸಲಾಗುವುದು. ಪ್ರತಿ ಹಂತದಲ್ಲಿ ಶಿಕ್ಷಣವನ್ನು ಉಚಿತವಾಗಿ ಗುಣಮಟ್ಟದಿಂದ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ, ತಾಲ್ಲೂಕಿಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅನುಷ್ಠಾನಕ್ಕೆ ಹೆಚ್ಚಿನ ಶ್ರಮ ವಹಿಸಲಾಗುವುದು. ನಿರುದ್ಯೋಗ ಹೋಗಲಾಡಿಸಲು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಪಕ್ಷಕ್ಕೆ ಎಲ್ಲ ಕಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.