
ಬಿ. ಬೋರಮ್ಮ
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬಿ. ಬೋರಮ್ಮ(45) ಎಂಬ ಮಹಿಳೆ ಚಿಕ್ಕಮಗಳೂರು ತಾಲ್ಲೂಕಿನ ಕಾಫಿ ಎಷ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ತುಳಿತದಿಂದ ಭಾನುವಾರ ಮೃತಪಟ್ಟಿದ್ದಾರೆ.
ಬಿ. ಬೋರಮ್ಮ ತನ್ನ ಪತಿ ಸಣ್ಣ ನಾಗರಾಜ ಹಾಗೂ ಒಬ್ಬ ಮಗನೊಂದಿಗೆ ಕೂಲಿ ಅರಸಿ ಚಿಕ್ಕಮಗಳೂರು ಕಡೆ ಗುಳೆ ಹೋಗಿ ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದ ಬಳಿಯ ನಾಗೇಶಗೌಡ ಎಂಬುವವರ ತೋಟದಲ್ಲಿ ಇತರೆ ಕಾರ್ಮಿಕರೊಂದಿಗೆ ಭಾನುವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದಾಗ ಬೋರಮ್ಮನ ಮೇಲೆ ಆನೆ ದಾಳಿ ಮಾಡಿ ತುಳಿದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಶ್ ಎನ್.ಟಿ. ಅವರು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದು, ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಿಸುವುದರ ಜೊತೆಗೆ, ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ತರಲು ಸಹಾಯ ಮಾಡುವಂತೆ ಕೋರಿದ್ದಾರೆ.
ಮೃತರ ಕುಟುಂಬಕ್ಕೆ ಸಹಾಯ ಮಾಡುವ ಹಾಗೂ ಅಲ್ಲಿಂದ ಮೃತ ದೇಹ ತರಲು ಶಾಸಕ ಡಾ. ಶ್ರೀನಿವಸ್ ಎನ್.ಟಿ. ಅವರು ತಮ್ಮ ಅಪ್ತ ಜಾತಪ್ಪ ಹಾಗೂ ಇತರರನ್ನು ಚಿಕ್ಕಮಗಳೂರಿಗೆ ಕಳಿಸಿದ್ದು, ಜಾತಪ್ಪ ಅವರೊಂದಿಗೆ ಗ್ರಾಮದಲ್ಲಿದ್ದ ಮೃತ ಮಹಿಳೆಯ ಮತ್ತೊಬ್ಬ ಮಗ ಕೂಡ ಅವರ ಜೊತೆಗೆ ಹೋಗಿದ್ದು, ಅವರು ಈಗಾಗಲೇ ಚಿಕ್ಕಮಗಳೂರು ತಲುಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.