ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಾಪುರ ಗ್ರಾಮದ ಕೆರೆ ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿತವಾಗಿದ್ದು, ಕೆರೆ ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.
ನಿರಂತರ ಮಳೆಯಿಂದ ಅನೇಕ ವರ್ಷಗಳ ನಂತರ ಕೆರೆ ತುಂಬುವ ಹಂತಕ್ಕೆ ಬಂದಿದ್ದು, ಕೆರೆ ಏರಿಯಲ್ಲಿ ಅಲ್ಲಲ್ಲಿ ನೀರು ಬಸಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆ ಏರಿ ಮೇಲೆಯೇ ರಸ್ತೆ ಇದ್ದು, ಮಣ್ಣು ಕುಸಿತದಿಂದ ಮುಂದಿನ ಗ್ರಾಮಗಳ ಸಂಪರ್ಕವೂ ಕಡಿತಗೊಂಡಿದೆ. ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿದು ಕೆರೆ ಯಾವಾಗ ಬೇಕಾದರೂ ಒಡೆಯಬಹುದು ಎಂದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ಕೆರೆಯ ನೀರು ಕಸಾಪುರ ಗ್ರಾಮದ ಜನ–ಜಾನುವಾರುಗಳಿಗೆ ಆಸರೆಯಾಗಿದ್ದು, ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿದೆ. ತಕ್ಷಣ ಕೆರೆ ಏರಿಯನ್ನು ದುರಸ್ತಿ ಮಾಡಿ, ನೀರನ್ನು ಕಾಪಾಡಬೇಕು. ತುಂಗಭದ್ರ ನದಿಯಿಂದ ಕೆರೆಗೆ ನೀರು ಹರಿಸಬೇಕು’ ಎಂದು ಗುಡೇಕೋಟೆ ಹಾಗೂ ಕಸಾಪುರ ರೈತರು ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಳಿಸಿದರು. ಮಣ್ಣು ಕುಸಿದ ಭಾಗದಲ್ಲಿ ಮರಳಿನ ಚೀಲಗಳನ್ನು ಹಾಕಿ ಏರಿಯನ್ನು ಮುಚ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.