ADVERTISEMENT

ಸಿದ್ದರಾಮಯ್ಯ, ಎಚ್‌ಡಿಕೆ, ಕುಂ.ವೀರಭದ್ರಪ್ಪ ಸೇರಿ 61 ಜನರಿಗೆ ಜೀವ ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:48 IST
Last Updated 8 ಏಪ್ರಿಲ್ 2022, 15:48 IST
ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಕುಂ.ವೀರಭದ್ರಪ್ಪ
ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಕುಂ.ವೀರಭದ್ರಪ್ಪ   

ಹೊಸಪೇಟೆ (ವಿಜಯನಗರ): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಇರುವ ಅನಾಮಧೇಯ ಪತ್ರವೊಂದು ಸಾಹಿತಿ ಕುಂ. ವೀರಭದ್ರಪ್ಪ ಅವರ ಮನೆಗೆ ಪೋಸ್ಟ್‌ ಮಾಡಲಾಗಿದೆ. ಕೈಬರಹದಲ್ಲಿ ಬರೆದಿರುವ ಎರಡು ಪುಟಗಳ ಪತ್ರ ಏ.6ರಂದು ವೀರಭದ್ರಪ್ಪನವರ ಕೊಟ್ಟೂರಿನಲ್ಲಿರುವ ಮನೆಗೆ ಬಂದಿದೆ.

ಭದ್ರಾವತಿಯಿಂದ ಪತ್ರ ಪೋಸ್ಟ್‌ ಮಾಡಲಾಗಿದೆ. ಆದರೆ, ಪತ್ರ ಬರೆದವರ ವಿವರ ಇಲ್ಲ. ‘ಸಹಿಷ್ಣು ಹಿಂದು’ ಎಂದಷ್ಟೇ ಪತ್ರದೊಳಗೆ ಉಲ್ಲೇಖಿಸಲಾಗಿದೆ.

‘ಕುಂ. ವೀರಭದ್ರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ 61 ಜನ ಎಡಬಿಡಂಗಿ ಬುದ್ಧಿಜೀವಿ ಸಾಹಿತಿಗಳಿಗೇ.. ಹಿಜಾಬ್‌, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೀರಿ. ನೀವು ನಮ್ಮ ದೇಶದ ಅನ್ನ ಉಂಡು, ದೇಶದ ಗಾಳಿ ತೆಗೆದುಕೊಂಡು ದೇಶಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನಿಮ್ಮ ಸರ್ವನಾಶ ನಿಶ್ಚಿತ. ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕೆ ಸಿದ್ಧರಾಗಿ. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ’ ಸಹಿಷ್ಣು ಹಿಂದು ಎಂದು ಬೆದರಿಕೆ ಒಡ್ಡಲಾಗಿದೆ.

ADVERTISEMENT

‘ಮೊದಲಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಈಗ ನನ್ನ ಸೇರಿದಂತೆ 61 ಜನರನ್ನು ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಕೊಡಲು ನಿರ್ಧರಿಸಿರುವೆ. ಈಗಾಗಲೇ ಕೊಟ್ಟೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ನನಗೆ ಕರೆ ಮಾಡಿ, ಭದ್ರತೆ ಕೊಡುವುದಾಗಿ ತಿಳಿಸಿದ್ದಾರೆ’ ಎಂದು ಕುಂ. ವೀರಭದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಬೆದರಿಕೆ ಪತ್ರ: ಪುಟ 1
ಬೆದರಿಕೆ ಪತ್ರ: ಪುಟ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.