ಹೊಸಪೇಟೆ (ವಿಜಯನಗರ): ಸಮೀಪದ ವಿಶ್ವವಿಖ್ಯಾತ ಹಂಪಿಯಲ್ಲಿ ಮಂಗಳವಾರ ನಡೆದ ಜಾತ್ರೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ವಿಭಿನ್ನ ಮತದಾನ ಜಾಗೃತಿ ಕಾರ್ಯಕ್ರಮಗಳು ಗಮನ ಸೆಳೆದವು.
ಹಂಪಿಯ ವಿರೂಪಾಕ್ಷ ದೇವಸ್ಥಾನ ಮುಂಭಾಗದಲ್ಲಿ ಬೆಳಿಗ್ಗೆ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಸದಾಶಿವ ಪ್ರಭು ಬಿ. ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ವಿವಿಧ ಸಂಘ ಸಂಸ್ಥೆಯ ಮಹಿಳೆಯರು ತೇರು ಬೀದಿಯಲ್ಲಿ ರಂಗೋಲಿಗಳನ್ನು ಬಿಡಿಸಿ ಮತದಾನ ಜಾಗೃತಿ ಮೂಡಿಸಿದರೆ, ಕೋಲಾಟ, ಡೊಳ್ಳು ಕುಣಿತದೊಂದಿಗೆ ಜನಪದ ಕಲಾವಿದರು ನೃತ್ಯಗಳ ಮೂಲಕ ಜಾಥಾ ನಡೆಸಿದರು.
ಸಿಇಒ ಅವರು ಜಾತ್ರೆಗೆ ಬಂದಿದ್ದ ಭಕ್ತರು, ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಕಡ್ಡಾಯ ಮತದಾನದ ಕುರಿತು ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿದರು.
ಜಿಲ್ಲಾ ಚುನಾವಣಾ ರಾಯಭಾರಿ ಕಾರಮಂಚಪ್ಪ, ಯೋಜನಾ ನಿರ್ದೇಶಕ ಅಶೋಕ್ ಜಿ.ತೋಟದ್, ಲಕ್ಷ್ಮಿಕಾಂತ್, ಪತ್ರಿಬಸಪ್ಪ, ತಾಲ್ಲೂಕು ಪಂಚಾಯ್ತಿ ಇಒ ಹರೀಶ್ ಆರ್., ಉಮೇಶ್, ಪಿಡಿಒ ಗಂಗಾಧರ್, ಪ್ರಸನ್ನಕುಮಾರ್, ಫಾಜೀಲ್ ಅಹ್ಮದ್, ನಾಗರಾಜ್, ಕೊಟ್ರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.