ADVERTISEMENT

ಹೂವಿನಹಡಗಲಿ | ಭಕ್ತಸಾಗರದಲ್ಲಿ ಮೊಳಗಿದ 'ಸಂಪಾಯಿತಲೇ ಪರಾಕ್’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 1:53 IST
Last Updated 5 ಫೆಬ್ರುವರಿ 2026, 1:53 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ಕಾರಣಿಕ ನುಡಿ ಆಲಿಸಲು ಸೇರಿದ್ದ ಭಾರೀ ಜನಸ್ತೋಮ  –ಪ್ರಜಾವಾಣಿ ಚಿತ್ರ/ ಕೆ.ಸೋಮಶೇಖರ್‌
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ಕಾರಣಿಕ ನುಡಿ ಆಲಿಸಲು ಸೇರಿದ್ದ ಭಾರೀ ಜನಸ್ತೋಮ  –ಪ್ರಜಾವಾಣಿ ಚಿತ್ರ/ ಕೆ.ಸೋಮಶೇಖರ್‌   

ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ದ ಮೈಲಾರ ಸುಕ್ಷೇತ್ರದಲ್ಲಿ ಬುಧವಾರ ಜರುಗಿದ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ, ಸ್ವಾಮಿಯ ಭವಿಷ್ಯವಾಣಿಯನ್ನು ಆಲಿಸಿದರು.

ನಾಡಿನ ನಾನಾ ಭಾಗಗಳಿಂದ ಸುಕ್ಷೇತ್ರಕ್ಕೆ ಬಂದಿದ್ದ ಭಕ್ತರು, ಮಧ್ಯಾಹ್ನದಿಂದಲೇ ಕಾರಣಿಕ ಸ್ಥಳ ಡೆಂಕನಮರಡಿಯಲ್ಲಿ ಜಮಾವಣೆಗೊಳ್ಳತೊಡಗಿದ್ದರು. ಸಂಜೆ ವೇಳೆಗೆ ಡೆಂಕನಮರಡಿ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿ ಹೋಗಿತ್ತು. ಬಿರುಬಿಸಿಲನ್ನು ನೀಡಿದ್ದ ನೇಸರ ಪಡುವಣದಲ್ಲಿ ಹೊಂಗಿರಣ ಬೀರುತ್ತ ವಿಶ್ರಾಂತಿಗೆ ತೆರಳುತ್ತಿದ್ದಂತೆಯೇ ಲಕ್ಷ ಲಕ್ಷ ಕಣ್ಣು, ಕಿವಿಗಳು ಕಾರ್ಣಿಕ ನುಡಿ ನೋಡಲು, ಆಲಿಸಲು ಕಾತರವಾಗಿದ್ದವು.

ಸುಕ್ಷೇತ್ರದ ಧಾರ್ಮಿಕ ಪರಂಪರೆಯಂತೆ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಭಂಡಾರದ ಅರ್ಚನೆ, ಪೂಜಾ ಕೈಂಕರ್ಯಗಳು ಮುಗಿಯುತ್ತಿದ್ದಂತೆ ಕಾರಣಿಕದ ಗೊರವಪ್ಪ ರಾಮಣ್ಣ ಸರಸರನೇ ಬಿಲ್ಲು ಏರಿ ‘ಸಂಪಾಯಿತಲೇ ಪರಾಕ್’ ಎಂಬ ನುಡಿಯನ್ನು ನುಡಿದರು. ಸ್ವಾಮಿಯ ಭವಿಷ್ಯವಾಣಿ ಮೊಳಗುತ್ತಿದ್ದಂತೆ ಭಕ್ತರು ಹರ್ಷಗೊಂಡರು. ಡೆಂಕನ ಮರಡಿಯಲ್ಲಿ ‘ಏಳು ಕೋಟಿ ಏಳು ಕೋಟಿಗೋ... ಚಹಾಂಗ್ ಮಲೋ’ ಉದ್ಘೋಷ ಪ್ರತಿಧ್ವನಿಸಿತು.

ADVERTISEMENT

ಈ ವರ್ಷದ ಸ್ವಾಮಿಯ ನುಡಿಯು ಶುಭ ಸೂಚಕವಾಗಿದ್ದು, ಮಳೆ, ಬೆಳೆ ಸಮೃದ್ಧವಾಗಿ ಕಷ್ಟದ ದಿನಗಳು ದೂರವಾಗುವ ಆಶಾಭಾವದೊಂದಿಗೆ ಭಕ್ತರು ಡೆಂಕನಮರಡಿಯಿಂದ ತೆರಳಿದರು.

ಕಾರಣಿಕ ನುಡಿಯನ್ನು ಸ್ಪಷ್ಟವಾಗಿ ಗ್ರಹಿಸಲು ಕಾರಣಿಕ ಗೊರವಯ್ಯನಿಗೆ ಸೂಕ್ಷ್ಮ ತಂತ್ರಜ್ಞಾನದ ಮೈಕ್‌ಗಳನ್ನು ಅಳವಡಿಸಲಾಗಿತ್ತು. ಇಡೀ ಡೆಂಕನಮರಡಿಗೆ ಕೇಳಿಸುವಂತೆ ಲೈನರ್ ಸ್ಪೀಕರ್, ಮೂವಿಂಗ್ ಕ್ಯಾಮೆರಾ ಅಳವಡಿಸಲಾಗಿತ್ತು. ಕಾರಣಿಕದ ಬಳಿಕ ಅರ್ಧ ಗಂಟೆಕಾಲ ಧ್ವನಿವರ್ಧಕಗಳಲ್ಲಿ ಕಾರಣಿಕ ನುಡಿ ಪುನರಾವರ್ತನೆಯಾಗುತ್ತಿತ್ತು.

ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಸ್ವಾಮೀಜಿ, ಚೌಕಿಮಠದ ಗಾಡಿತಾತಾ, ಹೂವಿನಹಡಗಲಿ ಶಾಸಕ ಎಲ್.ಕೃಷ್ಣನಾಯ್ಕ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹರಪನಹಳ್ಳಿ ಉಪ ವಿಭಾಗಾಧಿಕಾರಿ ಸುರೇಶಕುಮಾರ್, ತಹಶೀಲ್ದಾರ್ ಕೆ.ಎಂ.ಗುರುಬಸವರಾಜ, ತಾಲ್ಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸವಿತಾ, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಇದ್ದರು.

ನೂಕುನುಗ್ಗಲು ಇಲ್ಲ: ಲಕ್ಷಾಂತರ ಜನ ಸೇರಿದ್ದರೂ ಯಾವುದೇ ನೂಕುನುಗ್ಗಲು ಇಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸಂಚಾರ ಸಂಚಾರ ದಟ್ಟಣೆ ಮಾತ್ರ ತಪ್ಪಲಿಲ್ಲ. ಸುಗಮ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಿದ್ದರೂ ಸಂಚಾರ ದಟ್ಟಣೆ ಕಂಡು ಬಂತು. ಕಾರಣಿಕ ಜರುಗಿದ ಬಳಿಕ ವಾಹನಗಳು ಏಕಕಾಲಕ್ಕೆ ಹೊರಟಿದ್ದರಿಂದ ಡೊಂಬರಹಳ್ಳಿ ರಸ್ತೆ, ಗುತ್ತಲ, ಹಡಗಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಭಕ್ತರು ತೊಂದರೆ ಅನುಭವಿಸಿದರು.

ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ಕಾರಣಿಕ ನುಡಿ ಆಲಿಸಲು ಸೇರಿದ್ದ ಭಾರೀ ಜನಸ್ತೋಮ  –ಪ್ರಜಾವಾಣಿ ಚಿತ್ರ
ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ಕುದುರೆಕಾರ ಸೇವೆ ಸಲ್ಲಿಸಿದರು

ಐದು ಲಕ್ಷಕ್ಕೂಅಧಿಕ ಭಕ್ತರ ಸಂಗಮ ಕಾರಣಿಕ ವಿಶ್ಲೇಷಣೆ ಈ ಬಾರಿಯೂ ಇಲ್ಲ ವಿಶ್ಲೇಷಣೆಗೆ ನಿರ್ಬಂಧ–ಡಿ.ಸಿ ಸಮರ್ಥನೆ

ದೇಹ ದಂಡಿಸಿ ಹರಕೆ ತೀರಿಸಿದ ಭಕ್ತರು ದೇವಸ್ಥಾನ ಆವರಣ ಹಾಗೂ ಡೆಂಕನಮರಡಿಯಲ್ಲಿ ಭಕ್ತರು ಅಹೋರಾತ್ರಿ ಹರಕೆ ತೀರಿಸಿದರು. ಚಡಿಯಿಂದ ಸ್ವತಃ ಹೊಡೆದುಕೊಂಡು ದೇಹ ದಂಡಿಸುವ ಕುದುರೆಕಾರ ಸೇವೆ ಗೊರವರಿಗೆ ಅನ್ನ ಪ್ರಸಾದದೊಂದಿಗೆ ಹಣ್ಣು ತುಪ್ಪ ಅರ್ಪಿಸುವ ದೋಣಿ ಸೇವೆ ದೀವಟಿಗೆ ಸೇವೆ ದೀಡು ನಮಸ್ಕಾರ ಜವುಳ ಛತ್ರಿ ಚಾಮರ ಸೇವೆ ಮುಂತಾದ ಹರಕೆಗಳನ್ನು ತೀರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.