ADVERTISEMENT

ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:43 IST
Last Updated 6 ಫೆಬ್ರುವರಿ 2026, 2:43 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಕಂಚವೀರರು ಕಾಲಿಗೆ ಸರಳು ಬಡಿದುಕೊಂಡು ಶಸ್ತ್ರ ಪವಾಡ ನಡೆಸಿದರು 
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಕಂಚವೀರರು ಕಾಲಿಗೆ ಸರಳು ಬಡಿದುಕೊಂಡು ಶಸ್ತ್ರ ಪವಾಡ ನಡೆಸಿದರು    

ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಗುರುವಾರ ನಡೆದ ಶಸ್ತ್ರ ಪವಾಡಗಳು ಭಕ್ತರನ್ನು ಬೆರಗುಗೊಳಿಸಿದವು.

ಪವಾಡಗಳನ್ನು ನಡೆಸಿಕೊಡುವ ಕಂಚವೀರರು ಮತ್ತು ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರನ್ನು ಮೆರವಣಿಗೆಯ ಮೂಲಕ ದೇವಸ್ಥಾನ ಆವರಣಕ್ಕೆ ಕರೆತರಲಾಯಿತು.

ಗಂಗಿಮಾಳಮ್ಮ ದೇವಸ್ಥಾನ ಮುಂಭಾಗದಲ್ಲಿ ಪವಾಡಗಳಿಗೆ ಬಳಸುವ ಶಸ್ತ್ರಗಳಿಗೆ ಪೂಜೆ ನೆರವೇರಿಸಲಾಯಿತು. ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಕಂಚವೀರರು ಭಂಡಾರದ ಆಶೀರ್ವಾದ ಪಡೆದು ಪವಾಡ ಆರಂಭಿಸಿದರು.

ADVERTISEMENT

ಕಾಲಿಗೆ ಭಗಣಿ ಗೂಟಗಳನ್ನು ಬಡಿದುಕೊಂಡು ರಂಧ್ರದ ಮೂಲಕ ಮುಳ್ಳುಗಳನ್ನು ದಾಟಿಸುವುದು, ಹರಿತವಾದ ಕಬ್ಬಿಣದ ಸಲಾಕೆಗಳನ್ನು ಕಾಲಿಗೆ ಜಜ್ಜಿಕೊಂಡು ಮತ್ತೊಂದು ಬದಿಯಿಂದ ಎಳೆಯುವುದು, ಮುಂಗೈಗೆ ಚೂಪಾದ ಕಬ್ಬಿಣದ ಮೊಳೆಯನ್ನು ಚುಚ್ಚಿಕೊಂಡು ಸ್ವಾಮಿಗೆ ಆರತಿ ಬೆಳಗುವುದು, ಕಬ್ಬಿಣದ ಸರಪಳಿ ಹರಿಯುವ ಪವಾಡಗಳು ನೆರೆದ ಭಕ್ತರಲ್ಲಿ ರೋಮಾಂಚನ ಉಂಟು ಮಾಡಿದವು.

ಮಾಲತೇಶ ಕಂಚವೀರ ಅವರು ಕಾಲಿಗೆ ಕಟ್ಟಿಗೆಯ ಭಗಣಿ ಗೂಟ ಬಡಿದುಕೊಂಡು ರಂಧ್ರದ ಮೂಲಕ ಮುಳ್ಳುಗಳನ್ನು ದಾಟಿಸುವ ಪವಾಡ ನಡೆಸಿದರು. ವಸಂತ ಕಂಚವೀರ, ಚೇತನ ಕಂಚವೀರ ಅವರು ಚೂಪಾದ ಕಬ್ಬಿಣದ ಸಲಾಕೆಗಳನ್ನು ಕಾಲಿಗೆ ಜಜ್ಜಿಕೊಂಡು ಮತ್ತೊಂದು ಬದಿಯಿಂದ ಎಳೆಯುವ ಪವಾಡ ಮಾಡಿದರು. ಫಕ್ಕಿರೇಶ ಕಂಚವೀರ ಅವರು ಕೈಗೆ ಚೂಪಾದ ಕಬ್ಬಿಣದ ಮೊಳೆಯನ್ನು ಚುಚ್ಚಿಕೊಂಡು ಸ್ವಾಮಿಗೆ ಆರತಿ ಬೆಳಗಿದರು. ಅನಿಲ್ ದಳವಾಯಿ ಸರಪಳಿ ಹರಿಯುವ ಪವಾಡ ನಡೆಸಿದರು.

ಮಹಾಮಂಗಳಾರತಿಯೊಂದಿಗೆ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ದೀಪಕ್ ಭೂಸರೆಡ್ಡಿ, ಪಿಎಸ್ಐ ಭರತ್ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಎಚ್.ಸವಿತಾ, ದೇವಸ್ಥಾನ ಸಮಿತಿ ಇಒ ಮಲ್ಲಪ್ಪ, ಕಾರಣಿಕದ ಗೊರವಯ್ಯ ಹಾಗೂ ಬಾಬುದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.