ADVERTISEMENT

‘ಆ.14ಕ್ಕೆ ಮೆಗಾ ಲೋಕ್‌ ಅದಾಲತ್‌’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 12:05 IST
Last Updated 3 ಆಗಸ್ಟ್ 2021, 12:05 IST
ಪದ್ಮಪ್ರಸಾದ್
ಪದ್ಮಪ್ರಸಾದ್   

ಹೊಸಪೇಟೆ (ವಿಜಯನಗರ): ‘ಆ. 15ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಗರದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿದೆ’ ಎಂದು ಇಲ್ಲಿನ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಪದ್ಮಪ್ರಸಾದ್ ತಿಳಿಸಿದರು.

‘ವರ್ಷದಲ್ಲಿ ಮೂರು ಬಾರಿ ಲೋಕ್‌ ಅದಾಲತ್ ಆಯೋಜಿಸಲಾಗುತ್ತದೆ. ಪಾಲು ವ್ಯಾಜ್ಯ, ಕೌಟುಂಬಿಕ ಕಲಹ, ಚೆಕ್‍ಬೌನ್ಸ್, ಹಲ್ಲೆ, ಜೀವನಾಂಶ ಪ್ರಕರಣ, ಆಸ್ತಿ ಭಾಗ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗುತ್ತದೆ. ಕಳೆದ ಬಾರಿ ನಡೆದ ಲೋಕ್‌ ಅದಾಲತ್‍ನಲ್ಲಿ 560 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅದಾಲತ್‍ನಲ್ಲಿ ಸಂಧಾನದ ಮೂಲಕ ಬಗೆಹರಿಯಬಹುದಾದ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಂಡು ಪರಿಹರಿಸುವ ಕೆಲಸ ಮಾಡಲಾಗುವುದು. ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಪ್ರಾಧಿಕಾರದ ವತಿಯಿಂದ ನೇಮಕಗೊಂಡ ಒಂಬತ್ತು ಜನ ವಕೀಲರು ರಾಜಿ ಮಾಡುವ ಕುರಿತು ತರಬೇತಿ ಪಡೆದಿದ್ದಾರೆ. ಅವರಿಂದ ಬಹುತೇಕ ಪ್ರಕರಣಗಳು ಇತ್ಯರ್ಥ ಕಂಡಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಕಿಶನ್ ಬಿ.ಮಾಡಲಗಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ತಾರಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.