
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಣಿಬಾಧಿತ ಪ್ರದೇಶಗಳ ಜನರಿಗೆ ಸ್ವಂತ ಸೂರು ಕಲ್ಪಿಸಲು ನಡೆಯುತ್ತಿದ್ದ ಸುಮಾರು ಆರು ವರ್ಷಗಳ ಸತತ ಪ್ರಯತ್ನಕ್ಕೆ ಕೊನೆಗೂ ಒಂದಿಷ್ಟು ಸಮಾಧಾನ ಸಿಕ್ಕಿದ್ದು, ಪಾಪಿನಾಯಕನಹಳ್ಳಿಯ ಡಾಲ್ಮಿಯಾ ಕ್ಯಾಂಪ್ನ 97 ನಿವಾಸಿಗಳ ಪೈಕಿ 74 ಮಂದಿಗೆ ಮಂಗಳವಾರ ಹಕ್ಕುಪತ್ರ ವಿತರಿಸಲಾಯಿತು.
ಶಾಸಕ ಎಚ್.ಆರ್.ಗವಿಯಪ್ಪ ಅವರು ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ನಿವೇಶನ ಹಕ್ಕುಪತ್ರ ವಿತರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಈ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್ಸಿ) ವತಿಯಿಂದ ನಡೆಯಲಿರುವ ವಸತಿ ನಿರ್ಮಾಣ ಯೋಜನೆಯಡಿಯಲ್ಲಿ ನಾಲ್ಕು ಗಣಿಬಾಧಿತ ಜಿಲ್ಲೆಗಳ ಪೈಕಿ ಇದೇ ಮೊದಲ ಬಾರಿಗೆ ಕ್ಯಾಂಪ್ ಒಂದರ ನಿವಾಸಿಗಳಿಗೆ ಕಾನೂನುಬದ್ಧವಾದ ಹಕ್ಕುಪತ್ರ ಲಭಿಸಿದೆ.
ಕೆಎಂಇಆರ್ಸಿಯ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರ ಮೇಲ್ವಿಚಾರಣಾ ಸಮಿತಿ ರಚಿಸಿದೆ. ಅವರ ನಿರ್ದೇಶನದಂತೆ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ ಬಿಜ್ಜೂರ್, ಪ್ರಮುಖರಾದ ಬಾಲಸುಬ್ರಹ್ಮಣ್ಯ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಹಕ್ಕುಪತ್ರ ವಿತರಿಸಲಾಗಿದೆ. ಮುಂದೆ ಈ ನಿವಾಸಿಗಳಿಗೆ ಅವರಿಗೆ ನಿಗದಿಪಡಿಸಿದ ನಿವೇಶನಗಳಲ್ಲಿ ಮನೆ, ನೀರು, ವಿದ್ಯುತ್ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಗವಿಯಪ್ಪ ಹೇಳಿದರು.
ಗಣಿಬಾಧಿತ ಜನರು ವಾಸಿಸುತ್ತಿರುವ ತಾಲ್ಲೂಕಿನ ಶಂಕರ್ ನಗರ, ಜಿಜಿ, ಪಿಬಿಎಸ್, ನಾಗಪ್ಪ ಕ್ಯಾಂಪ್ಗಳ ನಿವಾಸಿಗಳಿಗೆ (ಸುಮಾರು 373 ಕುಟುಂಬಗಳು) ಸಹ ಶೀಘ್ರದಲ್ಲೇ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
23 ಮಂದಿಗೂ ಸಿಗಲಿದೆ ಹಕ್ಕುಪತ್ರ: ಡಾಲ್ಮಿಯಾ ಕ್ಯಾಂಪ್ ಎಲ್ಲಾ 97 ಕುಟುಂಬಗಳೂ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದವು. ವಿವಿಧ ತಾಂತ್ರಿಕ ಕಾರಣಗಳಿಂದ 23 ಕುಟುಂಬಗಳಿಗೆ ಈಗ ಹಕ್ಕುಪತ್ರ ಸಿಕ್ಕಿಲ್ಲ, ಅವರಿಗೆ ಸಹ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸಿಗಲಿದೆ, ಹಕ್ಕುಪತ್ರ ಸಿಕ್ಕಿದವರಿಗೆ ತಲಾ ₹7 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡಲಾಗುತ್ತದೆ ಎಂದು ಶಾಸಕ ಗವಿಯಪ್ಪ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಆಲಂ ಬಾಷಾ, ಪಿ.ಕೆ.ಹಳ್ಳಿ ಪಿಡಿಒ ಬೀರಪ್ಪ, ವಸತಿ ಇಲಾಖೆ ನೋಡಲ್ ಅಧಿಕಾರಿ ಮಹೇಶ್, ಗ್ರಾಮ ಪಂಚಾಯತಿ ಆಢಳಿತಾಧಿಕಾರಿ ಸಿಂಧು ಅಂಗಡಿ, ಸಖಿ ಟ್ರಸ್ಟ್ನ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ, ಕ್ಯಾಂಪ್ನ ಮುಖಂಡರಾದ ಶಿವಪ್ಪ, ಕೆ.ಕಲ್ಯಾಣಿ, ರವಿ ಇತರರು ಇದ್ದರು.
‘ಸಖಿ ಟ್ರಸ್ಟ್’ ಶ್ರಮದ ಫಲ
ಗಣಿಬಾಧಿತ ಪ್ರದೇಶಗಳ ನಿವಾಸಿಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಎನ್ಜಿಒ ‘ಸಖಿ ಟ್ರಸ್ಟ್’ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಸರ್ಕಾರ ಮತ್ತು ನಿವಾಸಿಗಳ ನಡುವಿನ ಕೊಂಡಿಯಂತೆ ಅದು ಬಹಳಷ್ಟು ಕೆಲಸ ಮಾಡಿದೆ. ‘ಪ್ರಜಾವಾಣಿ’ಯಲ್ಲಿ 10 ತಿಂಗಳ ಹಿಂದೆ ಕ್ಯಾಂಪ್ ನಿವಾಸಿಗಳ ಸೂರಿನ ಸಮಸ್ಯೆಗಳ ಸರಣಿ ವರದಿ ಪ್ರಕಟವಾಗಿತ್ತು. ಇದೆಲ್ಲವನ್ನೂ ನೆನಪು ಮಾಡಿಕೊಂಡಿರುವ ಟ್ರಸ್ಟ್ನ ಸಂಸ್ಥಾಪಕ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ ಅವರು ಮೊದಲ ಹಂತದಲ್ಲಿ 74 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿದ್ದಕ್ಕೆ ಖುಷಿಪಟ್ಟಿದ್ದು ಉಳಿದ ಗಣಿಬಾಧಿತ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ಸೂರಿನ ಭಾಗ್ಯವನ್ನು ಶೀಘ್ರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.