
ಹರಪನಹಳ್ಳಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಮುಂಭಾಗ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿದ್ದ ಟೆಂಟ್ನಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಗುರುವಾರ ‘ನರೇಗಾ ಬಚಾವೋ ಸಂಗ್ರಾಮ’ ಉಪವಾಸ ಸತ್ಯಾಗ್ರಹ ನಡೆಸಿದರು.
ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಬೆಳಿಗ್ಗೆ 11ಕ್ಕೆ ಸತ್ಯಾಗ್ರಹ ಆರಂಭಿಸಿ ಸಂಜೆ 4 ಗಂಟೆಗೆ ಮುಕ್ತಾಯಗೊಳಿಸಿದರು.
ನೇತೃತ್ವ ವಹಿಸಿದ್ದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಮ-ನರೇಗಾಗೆ ತಿದ್ದುಪಡಿ ತಂದಿರುವ ಬಿಜೆಪಿ ಕೇಂದ್ರ ಸರ್ಕಾರ ‘ವಿಬಿ ಜಿ ರಾಮ್ಜಿ’ ಕಾಯ್ದೆ ಜಾರಿಗೊಳಿಸಿ, ಬಡವರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ದೇಶದ ಬಡ ಜನತೆಗೆ ಕೆಲಸ, ಊಟ, ಶಿಕ್ಷಣ ಸದುದ್ದೇಶದಿಂದ ಮನಮೋಹನ್ ಸಿಂಗ್ ಅವರು ಮ-ನರೇಗಾ ಯೋಜನೆ 2005ರಲ್ಲಿ ಜಾರಿ ಮಾಡಿದ್ದರು. ಅದರ ಆಶಯ ಬುಡಮೇಲು ಮಾಡಿ, ಮಹಾತ್ಮ ಗಾಂಧೀಜಿ ಅವರನ್ನು ಅಪಮಾನಿಸಿರುವ ಕೇಂದ್ರದ ಬಿಜೆಪಿ ಸಂವಿಧಾನ ವಿರೋಧಿ ಕಾಯ್ದೆ ಜಾರಿಗೊಳಿಸಿದೆ. ಬಡ ಜನತೆಗೆ, ಕೂಲಿ ಕಾರ್ಮಿಕರಿಗೆ ಮಾರಕವಾಗಿರುವ ವಿಬಿ ಜಿ ರಾಮ್ಜಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ‘ಸುಳ್ಳು ಹೇಳಿ ಅಧಿಕಾರ ಪಡೆದ ಬಿಜೆಪಿ ಹೊಸ ಕಾಯ್ದೆಗಳ ಮೂಲಕ ದೇಶದ ಜನತೆಗೆ ಮಾಡುವ ವಂಚನೆ ನಿಲ್ಲಿಸಿ ಮ-ನರೇಗಾ ಯೋಜನೆ ಪುನರ್ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ‘ವಿಬಿ-ಜಿ-ರಾಮ್ ಜಿ’ ಹೊಸ ಕಾಯ್ದೆ ವಿರೋಧಿಸಿ ಹಳ್ಳಿಯಿಂದ ದಿಲ್ಲಿಯ ತನಕ ಪಕ್ಷಾತೀತ ಹೋರಾಟ ಮಾಡಬೇಕು. ಮನರೇಗಾ ಮರುಸ್ಥಾಪನೆಗಾಗಿ ಪ್ರತಿಭಟನೆ ತೀವ್ರಗೊಳಿಸಲು ಸಂಕಲ್ಪ ಮಾಡಲಾಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕುಬೇರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ಶಶಿಧರ ಪೂಜಾರ, ಪ್ರಕಾಶ ಪಾಟೀಲ್, ಪೋಮ್ಯನಾಯ್ಕ, ಡಿ.ಅಬ್ದುಲ್ ರೆಹಮಾನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಾಟಿ ದಾದಾಪೀರ ಮಾತನಾಡಿದರು.
ಮುಖಂಡರಾದ ಮತ್ತಿಹಳ್ಳಿ ಶಿವಣ್ಣ, ನೀಲಗುಂದ ವಾಗೀಶ, ಚಿಕ್ಕೇರಿ ಬಸಪ್ಪ, ಕುಲುಮಿ ಅಬ್ದುಲ್, ವನಜಾಕ್ಷಿ, ನವರಂಗ, ದೇವೇಂದ್ರಗೌಡ, ಅಶೋಕ, ಮೆಹಬೂಬ್, ಉಮಾಮಹೇಶ್ವರಿ, ಜೀಷಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.