ADVERTISEMENT

ಹಂಪಿ ಸುತ್ತಮುತ್ತ ಅ.28ರಿಂದ ಮೊರಾರಿ ಬಾಪು ರಾಮಕಥಾ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 14:05 IST
Last Updated 26 ಅಕ್ಟೋಬರ್ 2025, 14:05 IST
   

ಹೊಸಪೇಟೆ: ರಾಮಚರಿತಮಾನಸ್‌ನ ಪ್ರತಿಪಾದಕರೂ ಆಗಿರುವ ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪು ಅವರು ಅ.28ರಿಂದ 30ರವೆಗೆ ಹಂಪಿ ಸುತ್ತಮುತ್ತ ಮೂರು ಪ್ರವಚನಗಳನ್ನು ನೀಡಲಿದ್ದಾರೆ.

11 ದಿನಗಳ ಐತಿಹಾಸಿಕ ರಾಮ ಯಾತ್ರೆಯ ಭಾಗವಾಗಿ ಮೊರಾರಿ ಬಾಪು ಅವರು 411 ಮಂದಿ ಭಕ್ತರ ಜತೆಗೆ ವಿಶೇಷ ರೈಲಿನಲ್ಲಿ ಹೊಸಪೇಟೆಗೆ ಬಂದು 28ರಂದು ಗಂಗಾವತಿ ತಾಲ್ಲೂಕಿನ ಪಂಪ ಸರೋವರದ ಶಬರಿ ಆಶ್ರಮದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಪ್ರವಚನ ನೀಡಲಿದ್ದಾರೆ. 29ರಂದು ಬೆಳಿಗ್ಗೆ 10ರಿಂದ ಅಂಜನಾದ್ರಿ ಸಮೀಪದ ಋಷ್ಯಮುಖ ಪರ್ವತದಲ್ಲಿ ಪ್ರವಚನ ನೀಡಲಿದ್ದರೆ, 30ರಂದು ಹಂಪಿ ಸಮೀಪದ ಮಾಲ್ಯವಂತ (ಪ್ರಶ್ರವಣ) ಪರ್ವತದಲ್ಲಿ ಬೆಳಿಗ್ಗೆ 10ಕ್ಕೆ ಪ್ರವಚನ ನೀಡಲಿದ್ದಾರೆ.

ಪಂಚವಟಿಯಿಂದ ಸೀತೆಯ ಅಪಹರಣದ ನಂತರ ಶ್ರೀರಾಮನು ಸೀತೆಯನ್ನು ಅರಸುತ್ತಾ ಹೋದ ಮಾರ್ಗದಲ್ಲಿ ಈ ಪ್ರವಚನ ಸರಣಿ ನಡೆಯುತ್ತಿದೆ. 

ADVERTISEMENT

ಅ.25ರಂದು ಚಿತ್ರಕೂಟದಿಂದ ಈ ರಾಮಕಥಾ ಯಾತ್ರೆ ಆರಂಭವಾಗಿದೆ. ಸತ್ನಾ, ನಾಸಿಕ್ ಮಾರ್ಗವಾಗಿ ಸಾಗಿಬರಲಿರುವ ಯಾತ್ರೆಯ ಐದನೇ ನಿಲುಗಡೆ ರೂಪದಲ್ಲಿ ಕಿಷ್ಕಿಂಧೆ ಎಂದೇ ಪ್ರಸಿದ್ಧವಾದ ಹಂಪಿ ಪರಿಸರದಲ್ಲಿ ಈ ಪ್ರವಚನ ಸರಣಿ ನಡೆಯಲಿದೆ.

ಈ ಐತಿಹಾಸಿಕ ರಾಮ ಯಾತ್ರೆಯು ಶ್ರೀರಾಮಚಂದ್ರನ ವನವಾಸ, ಲಂಕೆಗೆ ಪಯಣ ಮತ್ತು ಅಯೋಧ್ಯೆಗೆ ಹಿಂದಿರುಗಿದ ಕುರುಹುಗಳನ್ನು ಸಾರುವ ಪವಿತ್ರ ಸ್ಥಳಗಳ ದಾರಿಯಲ್ಲಿ ಸಾಗುತ್ತಾ, ಭಾರತ ಮತ್ತು ಶ್ರೀಲಂಕಾದಾದ್ಯಂತ 8,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸುತ್ತದೆ. ಭಾರತ ಮತ್ತು ಶ್ರೀಲಂಕಾದ ಪವಿತ್ರ ಸ್ಥಳಗಳಲ್ಲಿ ಒಟ್ಟು 9 ರಾಮಕಥಾಗಳನ್ನು ಆಯೋಜಿಸಲಾಗಿದೆ. 

ತಂಡವು ಅ.31ರಂದು ರಾಮೇಶ್ವರಕ್ಕೆ ತೆರಳಲಿದ್ದು, ನ.1ರಂದು ರಾಮೇಶ್ವರದಲ್ಲಿ, 3ರಂದು ಕೊಲಂಬೊದಲ್ಲಿ ಹಾಗೂ 4ರಂದು ಉತ್ತರ ಪ್ರದೇಶದ ಅಯೋಧ್ಯಾಧಾಮದಲ್ಲಿ ಪ್ರವಚನ ನಡೆಸಿ ಯಾತ್ರೆ ಕೊನೆಗೊಳಿಸಲಿದೆ.

ರಾಮಕಥಾ ಶ್ರವಣವು ಎಲ್ಲರಿಗೂ ಮುಕ್ತವಾಗಿದ್ದು, ಎಲ್ಲ ವರ್ಗಗಳ ಜನರು ಭಾಗವಹಿಸಬಹುದು. ಉಚಿತ ಭೋಜನ ವ್ಯವಸ್ಥೆಯೂ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.