ADVERTISEMENT

ರಾಜ್ಯದ ಬಹುತೇಕ ಶಾಸಕರಿಗೆ ಕೆಟ್ಟ ಅಭ್ಯಾಸಗಳಿವೆ –ರಾಜಶೇಖರ ಮುಲಾಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 10:12 IST
Last Updated 11 ಮಾರ್ಚ್ 2021, 10:12 IST
ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ   

ವಿಜಯನಗರ (ಹೊಸಪೇಟೆ): ‘ರಾಜ್ಯದ ಬಹುತೇಕ ಶಾಸಕರಿಗೆ ಕೆಟ್ಟ ಅಭ್ಯಾಸಗಳಿವೆ’ ಎಂದು ಅಣ್ಣಾ ಫೌಂಡೇಶನ್‌ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಜಿ ಆರೋಪಿಸಿದರು.

‘224 ಜನ ಶಾಸಕರು ಒಂದೇ ಇದ್ದಾರೆ. ಬೆಳಗಾವಿ ಅಧಿವೇಶನದ ನಡುವೆ ಬಿಡುವಿದ್ದಾಗ ಗೋವಾಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅವರ್‍ಯಾರು ಷಡ್ಯಂತ್ರಕ್ಕೆ ಬಲಿಯಾಗಬಾರದು. ಎಲ್ಲರೂ ಎಚ್ಚರದಿಂದ ಇರಬೇಕು. ಉತ್ತರ ಕರ್ನಾಟಕದ ಶಾಸಕರು ತಾಂತ್ರಿಕವಾಗಿ ಬಹಳ ಹಿಂದುಳಿದಿದ್ದು, ಮುಗ್ಧರಿದ್ದಾರೆ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಮೇಶ ಜಾರಕಿಹೊಳಿ ಅವರ ಘಟನೆಯಂತೆ ಇದುವರೆಗೆ ರಾಜ್ಯದಲ್ಲಿ 9 ಪ್ರಕರಣಗಳು ನಡೆದಿವೆ. ಒಬ್ಬರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಈ ಪ್ರಕರಣದಲ್ಲೂ ಯಾರಿಗಾದರೂ ಶಿಕ್ಷೆಯಾಗುತ್ತದೆ ಎಂದು ಅನಿಸುವುದಿಲ್ಲ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿರುದ್ಧ ಷಡ್ಯಂತ್ರ ಮಾಡಿರಬಹುದು ಅನಿಸುತ್ತೆ. ನನ್ನ ಬಳಿ ಸಿ.ಡಿ. ಇದೆ, ದಾಖಲೆಗಳಿವೆ ಎಂದು ಎಲ್ಲೂ ಹೇಳಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿದೆ. ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತೆ ನನ್ನ ಬಳಿ ಬಂದರೆ ಅವರಿಗಾಗಿ ಹೋರಾಟ ನಡೆಸಲು ಸಿದ್ಧ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಅಂತರ ಕಾಯ್ದುಕೊಂಡು ಇರಬೇಕು. ಸಂಘದವರ ಹೆಸರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ಸಂಘದ ಕೆಲ ಪ್ರಮುಖರನ್ನು ಭೇಟಿಯಾಗಿ ತಿಳಿಸಿರುವೆ. ಯಾವ ಅಭ್ಯರ್ಥಿಯೂ ಸಂಘದ ಹೆಸರು ಬಳಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.