ADVERTISEMENT

₹127 ಕೋಟಿ ಈರುಳ್ಳಿ ಪರಿಹಾರ ಕೊಡದೆ ಮೋಸ: ಶಾಸಕ ಕೃಷ್ಣ ನಾಯ್ಕ್‌ ಆಕ್ಷೇಪ

ಬಿಜೆಪಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:39 IST
Last Updated 4 ಡಿಸೆಂಬರ್ 2025, 4:39 IST
ಹೊಸಪೇಟೆಯಲ್ಲಿ ಮಂಗಳವಾರ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಮಂಗಳವಾರ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈರುಳ್ಳಿ ಬೆಳೆ ನಷ್ಟವಾಗಿದ್ದಕ್ಕೆ ₹127 ಕೋಟಿ ಪರಿಹಾರ ನೀಡುವುದಾಗಿ ಕೇವಲ ಭರವಸೆ ನೀಡಿದರು, ಅದು ಸಂಪುಟದ ಮುಂದೆ ಬರಲೇ ಇಲ್ಲ. ರೈತರು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಎಚ್ಚರಿಸಿದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ತುಂಗಭದ್ರಾ ಅಣೆಕಟ್ಟೆಗೆ ತಕ್ಷಣ ಗೇಟ್ ಅಳವಡಿಕೆ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಂಗಳವಾರ ಪಕ್ಷದ ವತಿಯಿಂದ ಇಲ್ಲಿ ನಡೆದ ಪ್ರತಿಭಟನೆ ವೇಳೆ ಅವರು ಈ ವಿಷಯ ತಿಳಿಸಿದರು. ಈರುಳ್ಳಿ ಬೆಳೆಗಾರರು ಇಂದು ಬೆಲೆ ಇಲ್ಲದೆ ಈರುಳ್ಳಿಯನ್ನು ತಿಪ್ಪೆ ಗುಂಡಿಗೆ, ಚರಂಡಿಗೆ ಎಸೆಯುತ್ತಿರುವುದನ್ನು ವಿವರಿಸಿದರ ಅವರು, ರೈತರು ಈ ಸರ್ಕಾರದ ಧೋರಣೆಯಿಂದ ರೋಸಿ ಹೋಗಿದ್ದಾರೆ, ಇತರ ಅಭಿವೃದ್ಧಿ ಕೆಲಸಗಳೂ ಸ್ಥಗಿತಗೊಂಡಿವೆ ಎಂದರು.

ಮಾಜಿ ಸಚಿವ ಕರುಣಾಕರ ರೆಡ್ಡಿ ಮಾತನಾಡಿ, ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ₹2,400 ಬೆಂಬಲ ಬೆಲೆ ಕೊಡುತ್ತಿದೆ, ಇದಕ್ಕೆ ರಾಜ್ಯ ಸರ್ಕಾರ ₹600 ಸೇರಿಸಿ ರೈತರ ನೆರವಿಗೆ ತಕ್ಷಣ ಬರಬೇಕು, ಶೀಘ್ರ ಖರೀದಿ ಕೇಂದ್ರ ತೆರೆಯಬೇಕು ಎಂದರು.

ADVERTISEMENT

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಇಂದು ₹2 ಲಕ್ಷಕ್ಕಿಂತ ಅಧಿಕ ಶುಲ್ಕ ವಿಧಿಸಲಾಗುತ್ತಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ₹25 ಸಾವಿರ ಇತ್ತು ಎಂದರು.

25 ಸಾವಿರ ಪರಿಹಾರ ಕೊಡಿ: ತುಂಗಭದ್ರಾ ಜಲಾಶಯದಿಂದ ಈ ಬಾರಿ ಎರಡನೇ ಬೆಳೆಗೆ ನೀರು ಹರಿಯದೆ ಲಕ್ಷಾಂತರ ರೈತರಿಗೆ ನಷ್ಟವಾಗಿದೆ, ಸರ್ಕಾರ ತಕ್ಷಣ ಎಕರೆಗೆ ₹25 ಸಾವಿರದಂತೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.

‘ನಿಮ್ಮ ಬೀದಿ ನಾಟಕ ನೋಡಿ ಜನ ಬೇಸತ್ತು ಹೋಗಿದ್ದಾರೆ. ನವೆಂಬರ್ ಕ್ರಾಂತಿ ಮಾದ್ಯಮಗಳ ಸೃಷ್ಠಿ, ವಿರೋಧ ಪಕ್ಷದವರ ಸೃಷ್ಠಿ ಎಂಬ ಸಿಎಂ ಹೇಳುತ್ತಿದ್ದರು, ದೆಹಲಿಗೆ ಶಾಸಕರನ್ನು ಯಾರು ಕಳಿಸಿದ್ದು, ಅವರಿಗೆ ಪಂಚತಾರಾ ಹೋಟೆಲ್‌ ಬುಕ್ ನಾವು ಮಾಡಿದ್ವಾ? ಸಿಎಂ ಕುರ್ಚಿಗಾಗಿ ಅಲ್ಲಿ ಐದಾರು ಬಣಗಳು ಈಗ ಕಚ್ಚಾಡುತ್ತಿವೆ. ಇದು ಬೂದಿ ಮುಚ್ಚಿದ ಕೆಂಡವೇ ಹೊರತು ಬಿಕ್ಕಟ್ಟು ಶಮನವಾಗಿಲ್ಲ. ಅದು ಯಾವಾಗ ಬೇಕಾದರೂ ಸ್ಫೋಟ ಆಗಬಹುದು. ನೀವು ಏನು ಬೇಕಾದರೂ ಮಾಡಿಕೊಳ್ಳಿ, ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸಿ’ ಎಂದು ಅವರು ಆಗ್ರಹಿಸಿದರು.

ನಗರದ ಪಾದಗಟ್ಟೆ ಆಂಜನೇಯ ದೇವಸ್ಥಾನದ ಬಳಿಯಿಂದ ಆರಂಭವಾದ ಪ್ರತಿಭಟನ ಮೆರವಣಿಗೆ ಗಾಂಧಿ ಚೌಕ, ಪುಣ್ಯಮೂರ್ತಿ ವೃತ್ತ, ಮಾಡ್ರನ್‌ ವೃತ್ತ, ಪುನೀತ್ ರಾಜ್‌ಕುಮಾರ್ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದಿತು. ಎರಡು ಎತ್ತಿನ ಬಂಡಿಗಳೂ ಜತೆಗಿದ್ದವು. ದಾರಿಯುದ್ದಕ್ಕೂ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಲಾಯಿತು.

ತಹಶೀಲ್ದಾರ್‌ಗೆ ತರಾಟೆ: ಮನವಿ ಸ್ವೀಕರಿಸಲು ಮೊದಲಿಗೆ ಶಿರಸ್ತೇದಾರ್ ಬಂದರು. ಇದರಿಂದ ಕೆರಳಿದ ರೇಣುಕಾಚಾರ್ಯ, ಶಾಸಕರು, ಮಾಜಿ ಸಚಿವರು ಪಾಲ್ಗೊಂಡಿರುವ ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್ ಬಾರದಿದ್ದರೆ ಅದು ಪ್ರತಿಭಟನೆಗೆ ಮಾಡುವ ಅವಮಾನ, ಕಚೇರಿಯಲ್ಲಿ ಇರುವ ಅವರನ್ನು ತಕ್ಷಣ ಕರೆಸಿ ಎಂದು ಅಬ್ಬರಿಸಿದರು. ಪೊಲೀಸರು ತಕ್ಷಣ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಶ್ರುತಿ ಅವರನ್ನು ಕರೆದುಕೊಂಡು ಬಂದರು. ತಹಶೀಲ್ದಾರ್ ಅವರಿಗೂ ಬುದ್ಧಿವಾದ ಹೇಳಿದ ರೇಣುಕಾಚಾರ್ಯ, ಹೀಗೆ ಅವಮಾನ ಮಾಡುವುದನ್ನು ಬಿಟ್ಟುಬಿಡಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅದ್ಯಕ್ಷ ಎಸ್.ಸಂಜೀವ ರೆಡ್ಡಿ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಬಲ್ಲಾಹುಣ್ಸಿ ರಾಮಣ್ಣ, ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್, ಉಪಾಧ್ಯಕ್ಷ ಜೀವರತ್ನಂ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್‌, ಐದೂ ಮಂಡಲ ಅಧ್ಯಕ್ಷರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.