ಹೊಸಪೇಟೆ (ವಿಜಯನಗರ): 'ನಮ್ಮ ಪೊಲೀಸ್, ನಮ್ಮ ಹೆಮ್ಮೆ' ಘೋಷವಾಕ್ಯದೊಂದಿಗೆ ರಾಜ್ಯದ ಎಲ್ಲೆಡೆಯಂತೆ ನಗರದಲ್ಲಿ ಸಹ ಭಾನುವಾರ ಮ್ಯಾರಥಾನ್ ನಡೆದಿದ್ದು, ವಿದೇಶಿಯರು ಸಹಿತ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಭರ್ಜರಿ ಸ್ಪಂದನ ವ್ಯಕ್ತವಾಯಿತು.
ತುಂಗಭದ್ರಾ ಅಣೆಕಟ್ಟೆಯ ಮಾಡೆಲ್ ರೂಂ ಸಮೀಪದಿಂದ ಆರಂಭವಾದ 5 ಕಿ.ಮೀ. ದೂರದ ಮ್ಯಾರಥಾನ್ ಸಾಯಿಬಾಬಾ ವೃತ್ತದಲ್ಲಿ ಕೊನೆಗೊಂಡಿತು. ಶಾಸಕ ಎಚ್.ಆರ್.ಗವಿಯಪ್ಪ ಮ್ಯಾರಥಾನ್ ಗೆ ಚಾಲನೆ ನೀಡಿದ್ದರು.
ಹಂಪಿಗೆ ಪ್ರವಾಸ ಬಂದಿದ್ದ ಸ್ವೀಡನ್ ನ ಫ್ರೀಡಾ ಅವರು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರವಾದರು. ಡಿ.ಸುವರ್ಣ ದ್ವಿತೀಯ, ಉಷಾ ರೋಹಿಣಿ ತೃತೀಯ ಸ್ಥಾನ ಪಡೆದರು.
ಪುರುಷರ ವಿಭಾಗದಲ್ಲಿ ಜಿ.ವಿನಯ್ ಪ್ರಥಮ, ಕೆ.ಮಂಜುನಾಥ ದ್ವಿತೀಯ, ಸ್ವೀಡನ್ ನ ಜೋಹನ್ ತೃತೀಯ ಸ್ಥಾನ ಗಳಿಸಿದರು.
ಅಧಿಕಾರಿಗಳ ವಿಭಾಗದಲ್ಲಿ ವಿಕಾಸ್ ಲಮಾಣಿ ಪ್ರಥಮ ಸ್ಥಾನ ಗಳಿಸಿದರು.
50 ಮಂದಿಗೆ ಪದಕ, ಪ್ರಮಾಣಪತ್ರ ವಿತರಿಸಿ ಮಾತನಾಡಿದ ಎಸ್ಪಿ ಶ್ರೀಹರಿಬಾಬು ಬಿ.ಎಲ್., ಸೈಬರ್ ಅಪರಾಧಗಳ ಕುರಿತು ಜನ ಎಚ್ಚರದಿಂದ ಇರಬೇಕು ಎಂದರು.
ಡಿಜಿಟಲ್ ಆರೆಸ್ಟ್ ಕುರಿತೂ ಈಚಿನ ದಿನಗಳಲ್ಲಿ ಕೇಳಿಬರುತ್ತಿರುವ ಆತಂಕ, ಇದರ ಬಗ್ಗೆ ಸಹ ಜನ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ಡ್ರಗ್ಸ್ ಗೆ ಹೇಳಿ ವಿದಾಯ, ಜೀವನಕ್ಕೆ ಹೇಳಿ ಜೈಕಾರ ಎಂದು ಹೇಳಿದರು.
ಎಎಸ್ಪಿ ಸಲೀಂ ಪಾಷಾ, ಆರ್ಟಿಒ ವಸಂತ ಚವಾಣ್, ಮುನಿರಾಬಾದ್ ಐಆರ್ಬಿ ಕಮಾಂಡೆಂಟ್ ಬಿ.ಎಂ.ಪ್ರಸಾದ್ ಇದ್ದರು.
ಜಿಲ್ಲೆಯ ವಿವಿಧ ಕಡೆಗಳಿಂದ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.