ಹೊಸಪೇಟೆ (ವಿಜಯನಗರ): ನಗರದ ಪ್ರಿಯಾಂಕಾ ಮಹಿಳಾ ಮತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಿಯಾಂಕಾ ಜೈನ್ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಬೇಕು, ಈ ವಂಚನೆಗೆ ಪ್ರೇರಣೆ ಎನ್ನಲಾದ ಶ್ರೀ ತಾಯಮ್ಮ ಮಹಿಳಾ ಶಕ್ತಿ ಸಂಘದ ಅಧ್ಯಕ್ಷರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 300ಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ಹಣ ವಂಚಿಸಲಾಗಿದೆ, ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ದೂರು ಸಲ್ಲಿಸಿರುವವರ ಅಭಿಪ್ರಾಯ ಪರಿಗಣಿಸಿ ಪ್ರತ್ಯೇಕ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪ್ರಿಯಾಂಕಾ ಜೈನ್ ಅವರು ದೂರು ಸಲ್ಲಿಸಿದವರಿಗೆ ಬೆದರಿಕೆ ಹಾಕುವುದು, ಮತ್ತೆ ವಂಚಿಸಲು ಅವರ ದಾರಿ ತಪ್ಪಿಸುತ್ತಿರುವ ಆರೋಪ ಇದ್ದು, ಅವರ ಜಾಮೀನು ರದ್ದುಪಡಿಸಬೇಕು, ದೂರು ಸಲ್ಲಿಸಿರುವ ಮತ್ತು ಸಲ್ಲಿಸಲಿರುವ ಕುಟುಂಬಗಳಿಗೆ ಸೂಕ್ತ ಕಾನೂನು ಹಾಗೂ ಜೀವ ರಕ್ಷಣೆ ನೀಡಬೇಕು, ಸಬ್ಸಿಡಿ ಸಾಲ ಕೊಡಿಸುವ ಹೆಸರಿನಲ್ಲಿ ಮುಂಗಡ ಹಣ ಕಟ್ಟಿಸಿಕೊಂಡಿರುವ ಹತ್ತಾರು ಕೋಟಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂತ್ರಸ್ತ ಮಹಿಳೆಯರ ಪೈಕಿ ಪದ್ಮಾ, ವಾಣಿ, ಮೇಘ, ಚೈತ್ರಾ ಮೊದಲಾದವರು ಮಾತನಾಡಿ, ತಾವು ಸಾಲ ಮಾಡಿ ಲಕ್ಷಾಂತರ ಹಣವನ್ನು ತಾಯಮ್ಮ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಅವರ ಮಾತು ನಂಬಿ ಪ್ರಿಯಾಂಕಾ ಪತ್ತಿನ ಸಂಘಕ್ಕೆ ನೀಡಿದ್ದು, ನಮಗೆ ವಂಚನೆಯಾಗಿದೆ. ಕವಿತಾ ಸಿಂಗ್ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ನಮಗೆ ನ್ಯಾಯ ಬೇಕು ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ಮುಖಂಡರಾದ ಎ.ಕರುಣಾನಿಧಿ, ಮರಡಿ ಜಂಬಯ್ಯ ನಾಯಕ, ಈಡಿಗರ ಮಂಜುನಾಥ, ವಿ.ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.