ಹೊಸಪೇಟೆ: ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಜನ ಬರತೊಡಗಿದ್ದು, ಕೂಲಂಕಷ ತಪಾಸಣೆ ನಡೆಸಿಯೇ ಅವರನ್ನು ಪೆಂಡಾಲ್ ಒಳಗೆ ಬಿಡಲಾಗುತ್ತಿದೆ. ಕೆಲವು ರೈತ ಸಂಘಟನೆಗಳು ಕಪ್ಪುಪಟ್ಟಿ ಪ್ರದರ್ಶನ, ಪ್ರತಿಭಟನೆ ನಡೆಸುವ ಸುಳಿವು ನೀಡಿರುವ ಕಾರಣ ತಪಾಸಣೆಯನ್ನು ಹೆಚ್ಚು ಬಿಗಿಗೊಳಿಸಲಾಗಿದೆ.
ಜೇಬಲ್ಲಿ ಗುಟ್ಕಾ ಪ್ಯಾಕೆಟ್ ಇದ್ದುದನ್ನು ಕಂಡ ಪೊಲೀಸರು ಅದನ್ನು ಎಸೆದು ಬರುವಂತೆ ತಿಳಿಸಿದ ಪ್ರಸಂಗ ಕಾಣಿಸಿತು. ಯಾರಾದರೂ ಕಪ್ಪು ಪಟ್ಟಿ ಅಥವಾ ಕಪ್ಪು ಬಾವುಟವನ್ನು ಮಡಚಿ ಇಟ್ಟುಕೊಂಡಿದ್ದಾರೆಯೇ ಎಂಬ ಕುರಿತೂ ತಪಾಸಣೆ ನಡೆದೇ ಇದೆ. ಮತ್ತೊಂದೆಡೆ ಹತ್ತಾರು ಲೋಹಶೋಧಕ ಯಂತ್ರಗಳನ್ನು ಅಳವಡಿಸಿದ್ದು, ಅದರ ಮೂಲಕವೇ ಎಲ್ಲರನ್ನೂ ಪೆಂಡಾಲ್ ಒಳಗಕ್ಕೆ ಬಿಡಲಾಗುತ್ತಿದೆ.
ಎಸ್ಪಿ ಶ್ರೀಹರಿಬಾಬು ಬಿ.ಎಲ್. ಅವರೇ ಸ್ವತಃ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಅವರಿಗೆ ಇನ್ನೂ ಇಬ್ಬರು ಎಸ್ಪಿಗಳು ಸಾಥ್ ನೀಡಿದ್ದಾರೆ. ಹಲವು ಸಚಿವರು, ಶಾಸಕರು ಈಗಾಗಲೇ ನಗರಕ್ಕೆ ಬಂದಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರ ಎಲ್ಲ ಗಣ್ಯರು 11.30ರಿಂದ 12 ಗಂಟೆಯೊಳಗೆ ನಗರ ತಲುಪುವ ಸಾಧ್ಯತೆ ಇದೆ. ಅದಕ್ಕಿಂತ ಮೊದಲಾಗಿ 10.30ರ ಸುಮಾರಿಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.