ಕೂಡ್ಲಿಗಿ: ತಾಲ್ಲೂಕಿನ ಅಪ್ಪೇನಹಳ್ಳಿ ತಾಂಡಾದಲ್ಲಿ ಬುಧವಾರ ರಾತ್ರಿ ಮನೆ ಮುಂದೆ ಕಟ್ಟಿದ್ದ ಟಗರುಗಳ ಮೇಲೆ ಮೂರು ಚಿರತೆ ದಾಳಿ ಮಾಡಿದ್ದರಿಂದ 9 ಟಗರು ಸಾವನ್ನಪ್ಪಿವೆ.
ತಾಂಡಾದ ಜಾಣನಾಯ್ಕ್ ಎಂಬುವವರು ತಾವು ಸಾಕಿದ್ದ 9 ಟಗರುಗಳನ್ನು ಮನೆ ಮುಂದೆ ಕಟ್ಟಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮೂರು ಚಿರತೆಗಳು ಏಕಕಾಲಕ್ಕೆ ಟಗರುಗಳ ಮೇಲೆ ದಾಳಿ ಮಾಡಿವೆ. ಈ ವೇಳೆ ಮನೆ ಮುಂದೆ ಮಲಗಿದ್ದ ಜಾಣನಾಯ್ಕ್, ಸಂಗೀತಾಬಾಯಿ ದಂಪತಿ ಚಿರತೆಗಳನ್ನು ಕಂಡು ಮನೆ ಒಳಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆ ಮುಂದೆ ಕಟ್ಟಿದ್ದ 9 ಟಗರುಗಳನ್ನು ಸಾಯಿಸಿ, ಅವುಗಳಲ್ಲಿ ಎರಡನ್ನು ಹೊತ್ತೊಕೊಂಡು ಕಾಡಿನತ್ತ ಓಡಿ ಹೋಗಿವೆ.
ಒಂದು ಟಗರು ₹20 ಸಾವಿರ ಹಾಗೂ ಉಳಿದ ಎಂಟು ಟಗರುಗಳು ಸುಮಾರು ₹15 ಸಾವಿರ ಬೆಲೆ ಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಗುಡೇಕೋಟೆ ವಲಯ ಅರಣ್ಯ ಅಧಿಕಾರಿ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಾಣ ನಾಯ್ಕ್ ಹಾಗೂ ಸಂಗೀತಾಬಾಯಿ ಪ್ರತಿ ವರ್ಷ ಕಬ್ಬು ಕಡಿಯಲು ವಲಸೆ ಹೋಗುತ್ತಿದ್ದರು. ಆದರೆ ಕೋವಿಡ್ನಿಂದ ಈ ವರ್ಷ ವಲಸೆ ಹೋಗುವುದು ಬೇಡ ಎಂದು ಹೇಳಿ ಟಗರು ಮರಿಗಳನ್ನು ಖರೀದಿ ಮಾಡಿ ಅವುಗಳನ್ನು ಸಾಕಿದ್ದರು. ಎಂದು ತಾಂಡಾದಲ್ಲಿಯೇ ಉಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.