ಹೊಸಪೇಟೆ(ವಿಜಯನಗರ): ಸ್ಥಳೀಯ ಪಟೇಲ್ ನಗರದ ತರಕಾರಿ ವರ್ತಕ ಹೈದರ್ ಅಲಿ ಅವರು ಶುಕ್ರವಾರ ದಿನಪತ್ರಿಕೆ ವಿತರಕರಿಗೆ ಉಚಿತವಾಗಿ ತರಕಾರಿ ಕಿಟ್ ವಿತರಿಸಿದರು.
ಪತ್ರಿಕಾ ವಿತರಕರು ಸೇರಿದಂತೆ ಬಡವರಿಗೆ ಒಟ್ಟು ಐದು ಬಗೆಯ ತರಕಾರಿ ಒಳಗೊಂಡ 350 ಕಿಟ್ ವಿತರಿಸಿದರು. ಹೋದ ವರ್ಷ ಲಾಕ್ಡೌನ್ ಘೋಷಿಸಿದಾಗಲೂ ಬಡವರು, ನಿರ್ಗತಿಕರಿಗೆ ಮೂರು ಸಾವಿರ ತರಕಾರಿ ಕಿಟ್ ವಿತರಿಸಿದ್ದರು.
‘ತಹಶೀಲ್ದಾರ್ ಅವರ ಅನುಮತಿ ಪಡೆದು ಪತ್ರಿಕಾ ವಿತರಕರು, ಬಡವರಿಗೆ ತರಕಾರಿ ಕಿಟ್ ವಿತರಿಸಿದ್ದೇನೆ. ಹಂತ ಹಂತವಾಗಿ ಎಲ್ಲ ಬಡಜನತೆಗೂ ಕಿಟ್ ವಿತರಿಸಲು ಯೋಜನೆ ಹಾಕಿಕೊಂಡಿದ್ದೇನೆ. ಜನರಿಗೆ ನೆರವಾಗುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಅನ್ಯ ಉದ್ದೇಶವಿಲ್ಲ’ ಎಂದು ಹೈದರ್ ಅಲಿ ಹೇಳಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರ್ ಮಾತನಾಡಿ, ‘ಲಾಕ್ಡೌನ್ ಸಂದರ್ಭದಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಇಲಾಖೆಯು ಸಹಕಾರ ನೀಡುತ್ತಿದೆ. ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ತರಕಾರಿ ಹಂಚುತ್ತಿರುವ ಕಾರ್ಯ ಶ್ಲಾಘನೀಯ. ನಗರದ ವಿವಿಧ ಭಾಗಗಳಿಗೆ ತೆರಳಿ ತರಕಾರಿ ಕಿಟ್ ಹಂಚಲು ನೆರವಾಗುವ ಸಲುವಾಗಿ ಇಲಾಖೆಯಿಂದ ಪಾಸ್ ಸಹ ವಿತರಿಸಲಾಗಿದೆ’ ಎಂದು ತಿಳಿಸಿದರು. ಖದೀರ್, ಪರ್ವೇಜ್, ಮಾಬಾಷ, ಖಾಸಿಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.