ಹೊಸಪೇಟೆ (ವಿಜಯನಗರ):‘ನದಿ ಜೋಡಣೆ ಯೋಜನೆ ದೇಶದ ಜನರ ಕನಸಾಗಿದೆ. ಆ ಕನಸು ಈಡೇರಬೇಕು. ಈ ನಿಟ್ಟಿನಲ್ಲಿ ರಾಜ್ಯಗಳು ಮುಂದೆ ಬರಬೇಕು. ಎಲ್ಲ ನದಿಗಳ ನೀರು ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡರೆ ರೈತರ ಬಾಳು ಹಸನಾಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ’ ಎಂದುಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಹೇಳಿದರು.
ಶುಕ್ರವಾರ ಸಂಜೆ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು,‘ನಾನು ಕೂಡ ಒಬ್ಬ ರೈತನ ಮಗ. ದೇಶದ ಯಾವುದೇ ಜಲಾಶಯಕ್ಕೆ ಭೇಟಿ ಕೊಟ್ಟರೆ ನನಗೆ ಬಹಳ ಸಂತೋಷವಾಗುತ್ತದೆ. ಈ ವರ್ಷ ಜಲಾಶಯ ಸಂಪೂರ್ಣ ತುಂಬಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಬಹುದು’ ಎಂದರು.
‘ಜಲಾಶಯಗಳು ಅಕ್ಷಯ ಪಾತ್ರವಿದ್ದಂತೆ. ಜನರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಜಲಾಶಯ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ತುಂಬುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಂತಸದ ವಿಷಯ. ಭವಿಷ್ಯದ ವರ್ಷಗಳಲ್ಲಿಯೂ ಇದೇ ರೀತಿ ಜಲಾಶಯ ತುಂಬಲೆಂದು ಹಾರೈಸುತ್ತೇನೆ. ಜಲಾಶಯ ತುಂಬಿ ಹಿಂದುಳಿದ ಕರ್ನಾಟಕ, ತೆಲಂಗಾಣದ ಪ್ರದೇಶಗಳಿಗೆ ಒಳ್ಳೆಯದಾಗಲಿ. ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ನೀರಿನ ಸಂಗ್ರಹಕ್ಕೆ ಒತ್ತು ಕೊಡಬೇಕು. ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ’ ಎಂದು ಹೇಳಿದರು.
ಜಲಾಶಯದ ಮುಂದೆ ಕುಟುಂಬ ಸದಸ್ಯರ ಜೊತೆ ಸೆಲ್ಫಿ:ಪತ್ನಿ ಎಂ. ಉಷಾ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ವೆಂಕಯ್ಯ ನಾಯ್ಡು, ಅಣೆಕಟ್ಟೆ ಮೇಲೆ ಕಾರಿನಲ್ಲಿ ತೆರಳಿದರು. ಬಳಿಕ ಕೆಲ ದೂರದ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಕ್ರಸ್ಟ್ಗೇಟ್ಗಳಿಂದ ನೀರು ಹರಿದು ಹೋಗುತ್ತಿರುವುದನ್ನು, ಜಲಾಶಯ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ನೀರನ್ನು ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಜಲಾಶಯದ ಅಂಚಿನಲ್ಲಿ ನಿಂತುಕೊಂಡು ಕುಟುಂಬ ಸದಸ್ಯರೊಡನೆ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ವೆಂಕಯ್ಯ ನಾಯ್ಡು ಅವರನ್ನು ಸನ್ಮಾನಿಸಿ, ವಾರ್ಷಿಕ ವರದಿ ಒಪ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.