ADVERTISEMENT

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಸಾವರ್ಕರ್‌, ಮೋದಿ, ಪುನೀತ್‌ ಚಿತ್ರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 17:44 IST
Last Updated 8 ಸೆಪ್ಟೆಂಬರ್ 2022, 17:44 IST
   

ಹೊಸಪೇಟೆ (ವಿಜಯನಗರ): ವಿಜಯನಗರ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಗುರುವಾರ ರಾತ್ರಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವರ್ಕರ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ದಿವಂಗತ ನಟ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ ಗಮನ ಸೆಳೆಯಿತು.

ನಗರದ ವಡಕರಾಯ ದೇವಸ್ಥಾನದಿಂದ ರೈಲು ನಿಲ್ದಾಣ ರಸ್ತೆಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ ವರೆಗೆ ಮೆರವಣಿಗೆ ನಡೆಯಿತು. ಅಲಂಕರಿಸಿದ ವಾಹನದಲ್ಲಿ ಗಣಪನ ಮೂರ್ತಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಕಿವಿಗಡಚ್ಚಿಕ್ಕುವ ಸಂಗೀತಕ್ಕೆ ಯುವಕರು ಮೈಮರೆತು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಪಟಾಕಿ ಸಿಡಿಸಿ, ಕೇಸರಿ ಬಾವುಟ ಬೀಸುತ್ತ ಹೋದರು.

ದೊಡ್ಡ ಮಸೀದಿ ಬಳಿ ಮೆರವಣಿಗೆ ಬಂದಾಗ ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಎತ್ತರದ ಮೂರ್ತಿ ಇದ್ದದ್ದರಿಂದ ವಿದ್ಯುತ್‌ ತಂತಿಗಳು ಎದುರಾದವು. ಕೆಲಹೊತ್ತು ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿ, ವಿದ್ಯುತ್‌ ತಂತಿಗಳನ್ನು ಮೇಲಕ್ಕೆತ್ತಿ ಮೂರ್ತಿ ಮುಂದೆ ಸಾಗಲು ಜೆಸ್ಕಾಂ ಸಿಬ್ಬಂದಿ ನೆರವಾದರು. ರಾತ್ರಿ ಹತ್ತು ಗಂಟೆಯಾಗುತ್ತಿದ್ದಂತೆ ಪೊಲೀಸರು ಡಿ.ಜೆ. ಬಂದ್‌ ಮಾಡಿಸಿದರು. ಅನಂತರ ಮೂರ್ತಿ ವಿಸರ್ಜನೆಗೆ ಕೊಂಡೊಯ್ದರು. ದೊಡ್ಡ ಮಸೀದಿ ಸಮೀಪ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದರು. ಮಸೀದಿ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ವಿಜಯನಗರ ಹಿಂದೂ ಮಹಾಗಣಪತಿಯವರು ಹನ್ನೊಂದನೇ ದಿನ ಮೂರ್ತಿ ವಿಸರ್ಜನೆ ಮಾಡುತ್ತಾರೆ. ಇದರೊಂದಿಗೆ ಪ್ರಮುಖ ಗಣೇಶ ಮಂಡಳಿಗಳ ಮೂರ್ತಿ ವಿಸರ್ಜನೆ ಮುಗಿದಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.