ADVERTISEMENT

ವಿಜಯನಗರ: ಸಂಸದರ ನಿಧಿ–4 ಲಕ್ಷ ರೈತರಿಗೆ ಪ್ರಯೋಜನ

ಸಚಿವೆ ನಿರ್ಮಲಾ ಮಾದರಿ– ಕಲ್ಯಾಣ ಕರ್ನಾಟಕ ಭಾಗಕ್ಕೆ ವರದಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:28 IST
Last Updated 19 ಅಕ್ಟೋಬರ್ 2025, 7:28 IST
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸಮೀಪದ ಕಸಾಪುರದಲ್ಲಿ ಶುಕ್ರವಾರ ಮೌಲ್ಯವರ್ಧಿತ ರೈತ ಉತ್ಪನ್ನಗಳೊಂದಿಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಗಣ್ಯರು ಫೋಟೊ ತೆಗೆಸಿಕೊಂಡರು  –ಪ್ರಜಾವಾಣಿ ಚಿತ್ರ
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸಮೀಪದ ಕಸಾಪುರದಲ್ಲಿ ಶುಕ್ರವಾರ ಮೌಲ್ಯವರ್ಧಿತ ರೈತ ಉತ್ಪನ್ನಗಳೊಂದಿಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಗಣ್ಯರು ಫೋಟೊ ತೆಗೆಸಿಕೊಂಡರು  –ಪ್ರಜಾವಾಣಿ ಚಿತ್ರ   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಪಾಲಿನ ಸಂಸದರ ನಿಧಿಯನ್ನು ರೈತರ ಬೆಳೆಗಳ ಸಂಸ್ಕರಣಾ ಘಟಕಗಳಿಗೆ ವೆಚ್ಚ ಮಾಡಿರುವುದು ಬಹಳ ದೊಡ್ಡ ಬೆಳವಣಿಗೆ, ಇದರಿಂದ ಕಲ್ಯಾಣ ಕರ್ನಾಟಕ ಭಾಗದ 4 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ.ಹೇಳಿದರು.

ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರದಲ್ಲಿ ಶುಕ್ರವಾರ ಎಂಪಿಲ್ಯಾಡ್ಸ್ ಮತ್ತು ನಬಾರ್ಡ್‌ ಸಹಯೋಗದಲ್ಲಿ ಸ್ಥಾಪನೆಗೊಂಡಿರುವ ಹುಣಸೆ, ಶೇಂಗಾ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಬಹಳ ಮುಖ್ಯ ಪಾತ್ರ ವಹಿಸುತ್ತಿವೆ, ರಾಜ್ಯದ ಆರ್‌ಆರ್‌ಬಿಗಳು ದೇಶದಲ್ಲೇ ಮೂರನೇ ಸ್ಥಾನದಲ್ಲಿವೆ ಎಂದರು.

ಗ್ರಾಮೀಣ ಭಾಗದಲ್ಲಿನ ಆರ್ಥಿಕ ಸುಧಾರಣೆಯೇ ದೇಶದ ಅಭಿವೃದ್ಧಿಯ ಎಂಜಿನ್‌ ಆಗಿದೆ ಎಂದ ಅವರು, ಸಂಸದರ ನಿಧಿಯನ್ನು ಹೇಗೆ ಬಳಸಬಹುದು, ಅದು ನೀಡುವ ಪ್ರಯೋಜನವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನೋಡಿ ಕಲಿಯಬೇಕು ಎಂದರು.

ADVERTISEMENT

ಅಭಿವೃದ್ಧಿ ಆಯುಕ್ತರೂ ಆಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಕಸಾಪುರ ಶೇಂಗಾ, ಹುಣಸೆ ಘಟಕಕ್ಕೆ ರಾಜ್ಯ ಸರ್ಕಾರ ನಿವೇಶನ ನೀಡಿದೆ. ಗ್ರಾಮೀಣ ಭಾಗದ ಆರ್ಥಿಕತೆಗೆ ಇಂತಹ ಯೋಜನೆಗಳಿಂದ ಬಹಳ ಬಲ ಸಿಗಲಿದೆ. ರೈತ ಉತ್ಪಾದಕ ಸಂಘಟನೆಗಳು (ಎಫ್‌ಪಿಒ) ಬಲಿಷ್ಠಗೊಳ್ಳಬೇಕಿದ್ದು, ಅದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಸಿಗುತ್ತದೆ ಎಂದರು.

ಸಂಸದ ಇ.ತುಕಾರಾಂ ಮಾತನಾಡಿ, ಹಂಪಿ ಅಭಿವೃದ್ಧಿ ಮತ್ತು ಮೆಣಸಿನಕಾಯಿ ಸಂಸ್ಕರಣಾ ಘಟಕ ಸ್ಥಾಪನೆ ಕುರಿತಂತೆ ಹಲವು ಯೋಜನೆಗಳು ತಮ್ಮ ಬಳಿ ಇದ್ದು, ಖುದ್ದಾಗಿ ಭೇಟಿ ಮಾಡಿ ವಿವರವಾದ ಮಾಹಿತಿ ನೀಡಲಿದ್ದೇನೆ, ಸಚಿವರು ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಎಂಎಸ್ಎಂಇ ಯೋಜನೆಯಡಿಯಲ್ಲಿ ಸಾಲ ಮಂಜೂರಾದ ಕೆಲವು ಫಲಾನುಭವಿಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಚೆಕ್‌ ವಿತರಿಸಿದರು. 

ಒನಕೆ ಓಬವ್ವ ಶತ್ರುಗಳ ವಿರುದ್ಧ ಹೋರಾಡಿದಳು. ಅವಳು ಹುಟ್ಟಿದ ಊರಿನವರಾದ ನೀವು ಬಡತನ ವಿರುದ್ಧ ಹೋರಾಡಿ ಗೆಲ್ಲುವ ಪಣ ತೊಟ್ಟು ಮುನ್ನುಗಬೇಕು.
– ನಿರ್ಮಲಾ ಸಿತಾರಾಮನ್‌, ಕೇಂದ್ರದ ಹಣಕಾಸು ಸಚಿವೆ

ಸಿಕ್ಕಿದ ಅವಕಾಶ ಸಮರ್ಥ ಬಳಕೆ

ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಸಿಕ್ಕಿದ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡು ತಮ್ಮ ಕ್ಷೇತ್ರದ ದೇವದಾಸಿ ಪದ್ಧತಿ ಅಪೌಷ್ಟಿಕತೆ ನೀರಾವರಿ ಕೊರತೆ ಶೈಕ್ಷಣಿಕ ಹಿನ್ನಡೆ ಪರಿಶಿಷ್ಟ ಪಂಗಡದವರ ಬಾಹುಳ್ಯ ಮೊದಲಾದ ವಿಷಯಗಳನ್ನು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ಕೇಂದ್ರದಿಂದ ಅಧಿಕ ನೆರವು ಯಾಚಿಸಿದರು. ಬಳಿಕ ಮಾತನಾಡಿದ ಸಚಿವರು ಬಹುತೇಕ ಇದೇ ವಿಷಯಗಳನ್ನು ಎತ್ತಿಕೊಂಡು ಪರಿಹಾರ ಸೂತ್ರಗಳನ್ನು ಸೂಚಿಸಿದರು ಹಾಗೂ ನೆರವಿನ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.