
ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾನೂನನ್ನು ರದ್ದುಪಡಿಸಿ ಈ ಹಿಂದಿನ ನರೇಗಾ ಕಾನೂನನ್ನೇ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಮನರೇಗಾ ಉಳಿಸಿ ಆಂದೋಲನ ಕರ್ನಾಟಕ ವತಿಯಿಂದ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆಯ (ಗ್ರಾಕೂಸ್) ಜಿಲ್ಲಾ ಕಾರ್ಯಕರ್ತೆ ಶೈನಾಜ್ ಮತ್ತು ಇತರರು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರ ಮೂಲಕ ಪ್ರಧಾನಿ ಅವರಿಗೆ ಮನವಿ ಕಳುಹಿಸಿಕೊಟ್ಟರು.
ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ (ವಿಬಿ ಜಿ ರಾಮ್ ಜಿ) ಕಾನೂನು ಕಾರ್ಮಿಕರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುತ್ತದೆ, ಗ್ರಾಮೀಣ ಉದ್ಯೋಗವನ್ನು ಕೇಂದ್ರದ ಮರ್ಜಿಗೆ ಒಳಪಡಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹೊಸ ಕಾನೂನಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕನಿಷ್ಠ ವೇತನ ಹಕ್ಕನ್ನು ಬದಿಗೆ ಸರಿಸಿ, ಕೇಂದ್ರ ಸರ್ಕಾರವೇ ನಿರ್ಧರಿಸುವ ವೇತನ, ಕೆಲಸ, ಕಾಮಗಾರಿಗಳ ಮೂಲಕ ವಲಸೆ ಹೆಚ್ಚಿಸಿ ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಒದಗಿಸುವ ಈ ಕಾನೂನನ್ನು ನಾವು ವಿರೋಧಿಸುತ್ತೇವೆ. ಜ.26ರಂದು ಗ್ರಾಮ ಸಭೆಗಳಲ್ಲಿ ಸರ್ವಾನುಮತದಿಂದ ಕಾನೂನು ವಿರೋಧಿಸಿ ಠರಾವು ಕೈಗೊಂಡಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಖಂಡರಾದ ದುರುಗಮ್ಮ, ಚಿನ್ನಮ್ಮ, ಸುಧಾ, ರತ್ನಮ್ಮ, ನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.