
ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದ ರಥಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳಿದ್ದು, ಅದು ವಿಜಯನಗರ ಕಾಲದಲ್ಲಿ ವಿರೂಪಾಕ್ಷ ಬಜಾರ್ ಎಂದೇ ಕರೆಸಿಕೊಳ್ಳುತ್ತಿತ್ತು. ಅಲ್ಲಿಗೆ ಇದ್ದ ರಸ್ತೆಯನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನ ಆರಂಭವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದು ಕಲ್ಲು ಚಪ್ಪಡಿಯ ರಸ್ತೆಯಾಗಿತ್ತು. ಬಜಾರ್ನ ಪಕ್ಕದಲ್ಲೇ ಹಾದುಹೋಗುವ ಈ ರಸ್ತೆಯಲ್ಲೇ ಜನರು ಓಡಾಟ ಮಾಡುತ್ತ ಮುತ್ತು, ರತ್ನಗಳನ್ನು ಖರೀದಿಸುತ್ತಿದ್ದರು. ಮಳೆಗಾಲದಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗುವ ವ್ಯವಸ್ಥೆ ಮಾಡದ ಕಾರಣ ಈಚಿನ ದಿನಗಳಲ್ಲಿ ಈ ಪಾರಂಪರಿಕ ರಸ್ತೆ ಕಸದ ತೊಟ್ಟಿಯಾಗಿ, ಗಲೀಜು ನೀರಿನ ಗುಂಡಿಯಾಗಿ ಬದಲಾಗಿತ್ತು. ಅದಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಹಳೆಯ ಕಲ್ಲುಹಾಸಿನ ರಸ್ತೆಯ ಮೇಲೆ ಹೊಸ ಕಲ್ಲುಚಪ್ಪಡಿಯನ್ನು ಅಳವಡಿಸುತ್ತಿದೆ.
‘ಹಂಪಿಯ ನಿಜವಾದ ಸೌಂದರ್ಯ ಇರುವುದೇ ಅದರ ಪಾರಂಪರಿಕ ಕಲ್ಲುಗಳಲ್ಲಿ, ಕಲ್ಲಿನ ರಚನೆಗಳಲ್ಲಿ. ಜನರು ಓಡಾಡುತ್ತಿದ್ದ ರಸ್ತೆಗೆ ಕೂಡಾ ಅಷ್ಟೇ ಮಹತ್ವ ಇದೆ. ಅಭಿವೃದ್ಧಿಯ ಹೆಸರಲ್ಲಿ ಪಾರಂಪರಿಕ ರಸ್ತೆಯ ಅಂದ ಕೆಡಿಸಬಾರದು. ಮಳೆನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿ ಪಾರಂಪರಿಕ ರಸ್ತೆಯನ್ನು ಹಾಗೆಯೇ ಉಳಿಸುವುದು ಸಾಧ್ಯವಿದೆ, ಆದರೆ ಅದನ್ನು ಮಾಡದೆ ಹಂಪಿಯ ಸಹಜ ಸೌಂದರ್ಯಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ’ ಎಂದು ಹಲವು ಪ್ರವಾಸಿಗರು ‘ಪ್ರಜಾವಾಣಿ’ ಜತೆಗೆ ಬೇಸರ ಹಂಚಿಕೊಂಡರು.
ಈ ಬಗ್ಗೆ ಎಎಸ್ಐ ಅಧೀಕ್ಷಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.