ADVERTISEMENT

ವಿಜಯನಗರ: ಕರ್ಫ್ಯೂ ಉಲ್ಲಂಘಿಸಿದವರ ವಿರುದ್ಧ 583 ಕೇಸ್, ಹಂಪಿ ಸಂಪೂರ್ಣ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 8:11 IST
Last Updated 8 ಜನವರಿ 2022, 8:11 IST
ಪ್ರವಾಸಿಗರ ಭೇಟಿ ನಿರ್ಬಂಧಿಸಿರುವುದರಿಂದ ವಿಶ್ವಪ್ರಸಿದ್ಧ ಹಂಪಿ ಶನಿವಾರ ಸ್ತಬ್ಧಗೊಂಡಿದೆ.
ಪ್ರವಾಸಿಗರ ಭೇಟಿ ನಿರ್ಬಂಧಿಸಿರುವುದರಿಂದ ವಿಶ್ವಪ್ರಸಿದ್ಧ ಹಂಪಿ ಶನಿವಾರ ಸ್ತಬ್ಧಗೊಂಡಿದೆ.   

ಹೊಸಪೇಟೆ(ವಿಜಯನಗರ): ವಾರಾಂತ್ಯಕ್ಕೆ‌ ಪ್ರವಾಸಿಗರ ಭೇಟಿ ನಿರ್ಬಂಧಿಸಿರುವುದರಿಂದ ವಿಶ್ವಪ್ರಸಿದ್ಧ ಹಂಪಿ ಶನಿವಾರ ಸ್ತಬ್ಧಗೊಂಡಿದೆ. ಎಲ್ಲ ಸ್ಮಾರಕಗಳ ಬಳಿ ಎಂದಿನಂತೆ ಭದ್ರತಾ ಸಿಬ್ಬಂದಿ‌ ಇದ್ದರು.

ಹಂಪಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ತೆರೆದು ವಾಹನ ಸಂಚಾರ ತಡೆಯಲಾಗಿದೆ. ಪ್ರವಾಸಿಗರ ಓಡಾಟವಿಲ್ಲದೆ ಹಂಪಿಯಲ್ಲಿ ಮೌನ ಆವರಿಸಿಕೊಂಡಿತ್ತು.

ವಾರಾಂತ್ಯ ಕರ್ಫ್ಯೂ ಉಲ್ಲಂಘನೆ: ವಿಜಯನಗರದಲ್ಲಿ 583 ಕೇಸ್
'ವಾರಾಂತ್ಯದಲ್ಲಿ ಕರ್ಫ್ಯೂ ಉಲ್ಲಂಘನೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ 583 ಪ್ರಕರಣ ದಾಖಲಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಪರಿಶೀಲನೆ ನಡೆಸಿದ ನಂತರ ಸುದ್ಸಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯ ಓಡಾಟ, ಮಾಸ್ಕ ಧರಿಸದೇ ಇರುವುದು, ಕೋವಿಡ್ ಮಾರ್ಗಸೂಚಿ ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಜಿಲ್ಲೆಯಾದ್ಯಂತ 31 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತಿದೆ. ಪ್ರಯಾಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ತೋರಿಸಿದರಷ್ಟೇ ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲವಾದಲ್ಲಿ ಕೇಸ್ ದಾಖಲಿಸಲಾಗುತ್ತಿದೆ ಎಂದು ವಿವರಿಸಿದರು.

ಸಂಚಾರ ವಿರಳ: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿರಳವಾಗಿದೆ. ಸಾರಿಗೆ ಸಂಸ್ಥೆ ಬಸ್ಸು, ಆಟೊ, ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುತ್ತಿವೆ. ತರಕಾರಿ ಮಾರುಕಟ್ಟೆ, ಆಸ್ಪತ್ರೆ, ಮೆಡಿಕಲ್ ಶಾಪ್ ತೆರೆದಿವೆ. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿ, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಹೊಸಪೇಟೆಯ ಬಸ್ ನಿಲ್ದಾಣ ಬಳಿ ಎಸ್ಪಿ ಡಾ. ಅರುಣ್ ಕೆ. ಬಂದೋಬಸ್ತ್ ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT