ಹೊಸಪೇಟೆ (ವಿಜಯನಗರ): ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ 48ರಷ್ಟು ಇದ್ದರೂ ಅವರು ಭೂ ಒಡೆತನ ಹೊಂದಿರುವುದು ಶೇ13 ರಷ್ಟು ಮಾತ್ರ. ಇದು ಮಹಿಳೆಯನ್ನು ನಕಾರಾತ್ಮಕವಾಗಿ ಬಿಂಬಿಸುವ ಕಾರ್ಯವೆನಿಸುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕಕಿ ಪ್ರೊ. ಲಕ್ಷ್ಮೀದೇವಿ ವೈ.ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ ಮತ್ತು ಅಲ್ಲಂ ಸುಮಂಗಲಮ್ಮ ದತ್ತಿ ನಿಧಿ ಹಾಗೂ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ‘ಸಮಕಾಲೀನ ಮಹಿಳಾ ಸಮಸ್ಯೆಗಳು’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದು ಸರ್ಕಾರಿ ವಲಯದಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ವೇತನ ದೊರೆತರೂ, ಅತಿಹೆಚ್ಚು ಮಹಿಳೆಯರು ಭಾಗವಹಿಸುವ ಖಾಸಗಿ ಕ್ಷೇತ್ರದಲ್ಲಿ ವೇತನದ ಅಸಮಾನತೆಯನ್ನು ಕಾಣಬಹುದಾಗಿದೆ. ಮಹಿಳೆಯು ಸ್ವಾವಲಂಬಿಯಾಗಲು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಮಹಿಳೆಯರಿಗೆ ಪರಿಪೂರ್ಣ ಕೌಶಲದ ಅಗತ್ಯವಿದೆ’ ಎಂದರು.
ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರ ಪ್ರಮಾಣ ಇದ್ದರೂ ಶಾಸನ ಸಭೆಗಳಲ್ಲಿ ಪುರುಷರಿಗೆ ಸಮಾನವಾದ ಪ್ರಾತಿನಿಧ್ಯ ಮಹಿಳೆಯರಿಗೆ ದೊರೆತಿಲ್ಲ. ಇದರ ಬಗ್ಗೆ ಮಹಿಳೆಯರ ಜೊತೆಗೆ ನಾವೆಲ್ಲರೂ ಧ್ವನಿ ಎತ್ತುವ ಕಾರ್ಯವಾಗಬೇಕು ಎಂದರು.
ಮಹಿಳಾ ಅಧ್ಯಯನ ವಿಭಾಗ ಮುಖ್ಯಸ್ಥರಾದ ಪ್ರೊ.ಶೈಲಜಾ ಇಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.