ADVERTISEMENT

ಕುಸ್ತಿ ಪಂದ್ಯಾವಳಿ | ರಂಗೇರಿದ ಅಖಾಡ: ಪೈಲ್ವಾನರ ಕಾದಾಟ

ಸಿ.ಶಿವಾನಂದ
Published 18 ಜುಲೈ 2024, 5:51 IST
Last Updated 18 ಜುಲೈ 2024, 5:51 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಲ್ಲಾಹುಣ್ಸಿಯಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಕಲಬುರಗಿಯ ಸಿದ್ದಪ್ಪ ಮತ್ತು ದಾವಣಗೆರೆಯ ಗಿರೀಶ್ ಸೆಣಸಾಡಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಲ್ಲಾಹುಣ್ಸಿಯಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಕಲಬುರಗಿಯ ಸಿದ್ದಪ್ಪ ಮತ್ತು ದಾವಣಗೆರೆಯ ಗಿರೀಶ್ ಸೆಣಸಾಡಿದರು   

ಹಗರಿಬೊಮ್ಮನಹಳ್ಳಿ: ಮೋಡ ಕವಿದ ವಾತಾವರಣದಲ್ಲಿ ಮಳೆರಾಯನ ನಿರೀಕ್ಷೆ ಇತ್ತಾದರೂ ಕುಸ್ತಿ ಪಂದ್ಯಕ್ಕಾಗಿಯೇ ಮೂರು ತಾಸು ವಿರಾಮ ನೀಡಿದಂತಿತ್ತು. ಪೈಲ್ವಾನರ ಕಾಳಗದ ಬಳಿಕ ನಾಲ್ಕೈದು ನಿಮಿಷ ತುಂತುರು ಸಿಂಚನವಾಯಿತು.

ಆಂಜನೇಯ ದೇವಸ್ಥಾನದ ಮುಂದೆ ನಿರ್ಮಿಸಿದ್ದ ಕುಸ್ತಿ ಅಖಾಡದಲ್ಲಿ ಮೊಹರಂ ಅಂಗವಾಗಿ ಬಯಲು ಜಂಗಿ ಕುಸ್ತಿ ಬುಧವಾರ ರಂಗೇರಿತ್ತು. ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಪೈಲ್ವಾನರ ಕಾದಾಟ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು.

ಕಲಬುರಗಿ, ಮರಿಯಮ್ಮನಹಳ್ಳಿ, ದಾವಣಗೆರೆ, ಹರಪನಹಳ್ಳಿ, ನಾರಾಯಣದೇವರಕೆರೆ ಸೇರಿದಂತೆ ವಿವಿಧ ಕಡೆಗಳಿಂದ ಬಂದಿದ್ದ 40ಕ್ಕೂ ಹೆಚ್ಚು ಕುಸ್ತಿಪಟುಗಳು ತಮ್ಮ ಕೌಶಲಕ್ಕಾಗಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು.

ADVERTISEMENT

ಪರ್ಸಿ ಪೈಕಿಯ ಮೊದಲ ಪಂದ್ಯದಲ್ಲಿ ಕಲಬುರಗಿಯ ಸಿದ್ದಪ್ಪ ಹಾಗೂ ಹರಪನಹಳ್ಳಿ ಇರ್ಶಾದ್ ನಡುವೆ ನಡೆದ 15 ನಿಮಿಷಗಳ ಕಾದಾಟದಲ್ಲಿ ಇರ್ಷಾದ್ ಗಾಯಗೊಂಡು ಸೋಲೊಪ್ಪಿಕೊಂಡರು.

ಅಂತಿಮ ಪರ್ಸಿಪೈಕಿ ಪಂದ್ಯದಲ್ಲಿ ದಾವಣಗೆರೆಯ ಗಿರೀಶ್ ಮತ್ತು ಕಲಬುರಗಿಯ ಸಿದ್ದಪ್ಪ ನಡುವೆ ಜಿದ್ದಾಜಿದ್ದಿ ನಡೆಯಿತು. ಇಬ್ಬರೂ ಮದಗಜಗಳಂತೆ ಕಾದಾಡಿದರು. 20 ನಿಮಿಷಗಳ ಕಾದಾಟದಲ್ಲಿ 24 ವರ್ಷದ ಗಿರೀಶ್, 35 ವರ್ಷದ ಸಿದ್ದಪ್ಪ ಅವರಿಗೆ ಸಮಬಲದ ಹೋರಾಟ ನೀಡಿದರು. ಫಲಿತಾಂಶವೂ ಸಮ (ಡ್ರಾ) ಎಂದೇ ಬಂತು. ಈ ಕುರಿತು ಅಖಾಡದಲ್ಲಿ ಕೆಲಕಾಲ ಗೊಂದಲ ಸೃಷ್ಟಿ ಆಯಿತು, ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು. ಇಬ್ಬರೂ ನಗದು ಬಹುಮಾನ ಪಡೆದರು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹರಪನಹಳ್ಳಿಯ ಮಾರುತಿ ಮತ್ತು ಗಣೇಶ್, ಹನುಮನಹಳ್ಳಿಯ ಅಭಿ ಮತ್ತು ಹೊಸಪೇಟೆಯ ರಮೇಶ್ ನಡುವೆ ನಡೆದ ಕದನವೂ ಡ್ರಾದಲ್ಲಿ ಕೊನೆಗೊಂಡಿತು. ಹರಪನಹಳ್ಳಿಯ ಅರುಣ ಅವರು ಪಟ್ಟಣದ ಅಲ್ತಾಫ್ ಅವರನ್ನು, ಹರಪನಹಳ್ಳಿಯ ತಿಪ್ಪೇಶ್ ಅವರು ಚಿಲುಗೋಡಿನ ಕರಿಯಪ್ಪ ಅವರನ್ನು, ಹರಪನಹಳ್ಳಿಯ ಅಲಿ ಅವರು ಚೋರನೂರಿನ ಅನಿಲ್ ಅವರನ್ನು, ಮರಿಯಮ್ಮನಹಳ್ಳಿಯ ದಾಸರ ಮೋಹನ ಹಗರಿ ಕ್ಯಾದಿಗಿಹಳ್ಳಿಯ ಅಂಜಿನಪ್ಪ ಅವರನ್ನು, ಹರಪನಹಳ್ಳಿಯ ಗೋವಿಂದ್ ಅವರು ಕೆಚ್ಚಿನಬಂಡಿಯ ಸಾಗರನನ್ನು ಚಿತ್ ಮಾಡಿ ಬಹುಮಾನ ತಮ್ಮದಾಗಿಸಿಕೊಂಡರು.

ಮೂರು ತಾಸು ಕುಸ್ತಿ ಪ್ರೇಮಿಗಳು ತುದಿಗಾಲಲ್ಲೇ ನಿಂತಿದ್ದರು. ಗ್ರಾಮದ ತಂಬ್ರಹಳ್ಳಿ ಕೊಟ್ರೇಶ್ ಹಲಗೆ ವಾದನದ ಮೂಲಕ ಪೈಲ್ವಾನರನ್ನು ಹುರಿದುಂಬಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಕುಸ್ತಿಪ್ರೇಮಿಗಳು ಶಾಲೆ ಮತ್ತು ಮನೆಗಳ ಮೇಲೆ ಕುಳಿತು ಜಟ್ಟಿಗಳ ಕಾಳಗವನ್ನು ಕಣ್ತುಂಬಿಕೊಂಡರು.

ಪುರಸಭೆ ಸದಸ್ಯರಾದ ಎಂ.ಮರಿರಾಮಪ್ಪ, ಪವಾಡಿ ಹನುಮಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ನಾಗರಾಜ, ಮುಖಂಡರಾದ ಮೈಲಾರಪ್ಪ, ಎಚ್.ಜಹಾಂಗೀರ್, ಎನ್.ಕೆ.ಬಾಬು, ಕಾಸೀಂ ಸಾಹೇಬ್, ಡಿಶ್ ಮಂಜುನಾಥ ಪಂದ್ಯಾವಳಿಗೆ ಚಾಲನೆ ನೀಡಿದರು. ಎಸ್.ಪ್ರಶಾಂತ್, ಬಿ.ಕರೀಂಸಾಹೇಬ್, ಪೂಜಾರ ಮಂಜುನಾಥ, ಫಾಜಿಲ್, ಎಸ್.ತಿಪ್ಪಣ್ಣ, ವಾಸು, ಅಯ್ಯನಗೌಡ್ರು, ಎಸ್.ನಾಗರಾಜ ತೀರ್ಪುಗಾರರಾಗಿದ್ದರು.

ಮೂರು ತಾಸು ಚಿತ್ ಆದ ಪ್ರೇಕ್ಷಕರು ಸಮಬಲ ಸಾಧಿಸಿದ ದಾವಣಗೆರೆಯ ಗಿರೀಶ್– ಕಲಬುರಗಿಯ ಸಿದ್ದಪ್ಪ ಪೈಲ್ವಾನರ ಹುರಿದುಂಬಿಸಿದ ಹಲಗೆ ವಾದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.