ADVERTISEMENT

ಆಡುವ ವಯಸ್ಸಿನಲ್ಲಿ ನರಳುತ್ತಿರುವ ಬಾಲಕ..!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 5:00 IST
Last Updated 20 ಆಗಸ್ಟ್ 2012, 5:00 IST

ಲಕ್ಷ್ಮೇಶ್ವರ: ಚೆನ್ನಾಗಿ ತಿಂದುಂಡು ಆಟ ಆಡುತ್ತ ಬೆಳೆಯಬೇಕಾದ ವಯಸ್ಸಿನಲ್ಲಿ  ಬಾಲಕನೊಬ್ಬ ಶಾಲೆಯಲ್ಲಿ ಬಿದ್ದ ಪರಿಣಾಮ ಆತನ ಇಡೀ ದೇಹದ ಅಂಗಾಂಗಳು ಶಕ್ತಿ ಕಳೆದುಕೊಂಡಿದ್ದು, ದಿನವಿಡಿ ಮನೆಯಲ್ಲಿಯೇ ನರಳುತ್ತಾ ಕಾಲ ಕಳೆಯಬೇಕಾದ  ಪ್ರಸಂಗ ನಿರ್ಮಾಣವಾಗಿದೆ.

ಸಮೀಪದ ರಾಮಗಿರಿಯ ಮಹಾಂತೇಶ ಬಸವರಾಜ ಕಾಳೆ ಎಂಬ 9 ವರ್ಷದ ಪೋರ. ಆಟ ಆಡುವಾಗ ಶಾಲೆಯಲ್ಲಿ ಬಿದ್ದು ಈ ರೋಗದಿಂದ ನರಳುತ್ತಿರುವ ನತದೃಷ್ಟ. ಮೊದಲು ಎಲ್ಲ ಹುಡುಗರಂತೆ ಮಹಾಂತೇಶ ಕೂಡ ಚೆನ್ನಾಗಿ ಓಡಾಡಿಕೊಂಡಿದ್ದು ಅದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಮೂರು ತಿಂಗಳ ಹಿಂದಷ್ಟೇ  ಶಾಲೆ ಮೈದಾನದಲ್ಲಿ ಜಾರುಗುಂಡಿ ಆಡುವಾಗ ಆಕಸ್ಮಿಕವಾಗಿ ಆಯತಪ್ಪಿ ನೆಲಕ್ಕೆ ಬಿದ್ದ. ಆ ಸಂದರ್ಭದಲ್ಲಿ ಅವನ ಹಣೆಗೆ ಬಲವಾದ ಏಟು ಬಿದ್ದಿತ್ತು.
 
ತಕ್ಷಣ ಬಾಲಕನ ತಂದೆ ಬಸವರಾಜ ಮಗನಿಗೆ ಸ್ಥಳೀಯ ವೈದ್ಯರ ಹತ್ತಿರ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕೆಲವು ದಿನಗಳ ನಂತರ ಹುಡುಗನ ದೇಹದ ಅಂಗಾಂಗಗಳು ಸ್ವಾಧೀನ ತಪ್ಪಿರುವುದು ಪಾಲಕರ ಗಮನಕ್ಕೆ ಬಂದಿದೆ. ಬಾಲಕನನ್ನು ಶಿಗ್ಗಾವಿಯಲ್ಲಿ ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಾಂತೇಶನನ್ನು ಪರೀಕ್ಷಿಸಿದ ವೈದ್ಯರು ತಲೆಯ ಸ್ಕ್ಯಾನಿಂಗ್ ಮಾಡಸುವಂತೆ ಸಲಹೆ ನೀಡಿ ಕೆಲವೊಂದಿಷ್ಟು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ.

ಆದರೆ ತೀವ್ರ ಬಡತನದಿಂದ ಬಳಲುತ್ತಿರುವ ಬಸವರಾಜ ಕಾಳೆ ದಂಪತಿ ಮಗನ ಸ್ಕ್ಯಾನ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮಗ ಬಿದ್ದು ಮೂರು ತಿಂಗಳು ಗತಿಸಿದರೂ ಇನ್ನೂ ಸ್ಕ್ಯಾನಿಂಗ್ ಮಾಡಿಸಲು ಪಾಲಕರಿಗೆ ಸಾಧ್ಯವಾಗಿಲ್ಲ. ಕಾರಣ ಬಾಲಕನ ಅಂಗಾಂಗಗಳು ಈಗಲೂ ಸ್ವಾಧೀನ ತಪ್ಪಿದ್ದು ಅವನಿಗೆ ಸರಿಯಾಗಿ ನಡೆಯಲೂ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.