ADVERTISEMENT

ಕೂಲಿ ಕಾರ್ಮಿಕರ ಜೀವನ ಮಟ್ಟ ಸುಧಾರಿಸಲಿ

​ಪ್ರಜಾವಾಣಿ ವಾರ್ತೆ
Published 4 ಮೇ 2012, 8:50 IST
Last Updated 4 ಮೇ 2012, 8:50 IST

ಬಸವನಬಾಗೇವಾಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೂಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡುವುದರೊಂದಿಗೆ ಅವರ ಜೀವನ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಶ್ರಮಿಸುವ ಅಗತ್ಯವಿದೆ ಎಂದು ಜಿ.ಪಂ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಹೇಳಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಹಾಗೂ ಕಾಂಗ್ರೆಸ್ ಕಾರ್ಮಿಕರ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣ  ಸುಧಾರಣೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ತಾಲ್ಲೂಕಿಗೊಂದು ಕಾರ್ಮಿಕ ಆಸ್ಪತ್ರೆ , ಕಾರ್ಮಿಕರ ಹೆಣ್ಣು ಮಗುವಿನ ಮದುವೆ ವಯಸ್ಸಿಗೆ ಐವತ್ತು ಸಾವಿರ ನೀಡುವುದು ಹಾಗೂ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಕೇಂದ್ರದ ಯೋಜನೆಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು ಕೂಲಿ ಕಾರ್ಮಿಕರಿಗೆ ಶ್ರಮಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ಅವರಿಗೆ ಸರಿಯಾದ ವೇತನ ಸಿಗಬೇಕು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಓಲೇಕಾರ ಮಾತನಾಡಿ ಕಾರ್ಮಿಕರ ಶ್ರಮದಿಂದ ರಾಷ್ಟ್ರದ ಅಭಿವೃದ್ದಿ ಯಾಗುತ್ತದೆ. ಅವರ ಶ್ರಮ ಹಾಗೂ ಸೇವೆಯನ್ನು ಪ್ರತಿಯೊಬ್ಬರು ಗೌರವಿಸುವ  ಉದ್ದೇಶದಿಂದ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಪ್ರತಿ ಯೊಬ್ಬರು ಭಾಗವಹಿಸಬೇಕು ಎಂದು ಹೇಳಿದರು.

 ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಗೋಕಾಕ ಮಾತನಾಡಿ, ಕಾರ್ಮಿಕರಿಗೆ ಸಮಾನ ವೇತನ ಸಿಗಬೇಕು. ಅವರ ವೇತನದಲ್ಲಿ ಗಂಡು ಹೆಣ್ಣು ಎಂಬ ಭೇದ ಕಲ್ಪಿಸದೇ ಪುರುಷ ಕಾರ್ಮಿಕರಿಗೆ ಸಿಗುವ ವೇತನವು ಮಹಿಳಾ ಕಾರ್ಮಿಕರಿಗೂ ಸಿಗಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್  ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ರವಿ ರಾಠೋಡ ಪ್ರಾಸ್ತಾವಿಕ ಮಾತನಾಡಿದರು.ಕಾಂಗ್ರೆಸ್ ಕಾರ್ಮಿಕ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಹಿರೇ ಮಠ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮೀಣಿ ರಾಠೋಡ, ಜಯಶ್ರೀ ಶಿವಣಗಿ, ಬಿಸ್ಮಿಲ್ಲಾ ಇಬ್ರಾಹಿಂಪೂರ, ಅಜೀಜ ಬಾಗವಾನ, ಉದಯ ಮಾಮಲೇಕರ ವೇದಿಕೆಯಲ್ಲಿದ್ದರು.ರಮ್ಜಾನ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.