ಮುದ್ದೇಬಿಹಾಳ: ಪಟ್ಟಣದಲ್ಲಿ ಹಳೆ ತಹಶೀಲ್ದಾರ್ ಕಚೇರಿ ಹತ್ತಿರದ ಮುಖ್ಯ ರಸ್ತೆಯಿಂದ ಕೆರೆಯತನಕ ಮಾಡಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಆಗ್ರಹಿಸಿ ಪಟ್ಟಣದ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ದಾಯಿ ಅವರನ್ನು ಆಗ್ರಹಿಸಿದರು.
ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಹಾಗೂ ಬುಡ್ಡಾ ಕುಂಟೋಜಿ, ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದು ಮುಖ್ಯ ರಸ್ತೆ, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಇದರ ಎಸ್ಟಿಮೇಟ್ ಎಷ್ಟು ? ಗುತ್ತಿಗೆದಾರರು ಯಾರು?
ಕಾಮಗಾರಿಯ ಮಾಹಿತಿ ನೀಡುವ ಫಲಕವನ್ನು ಕಾಮಗಾರಿ ನಡೆಯವ ಸ್ಥಳದಲ್ಲಿ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಪುರಸಭೆ ಮುಖ್ಯಾಧಿಕಾರಿ ದಾಯಿ ಕೂಡಲೇ ಪುರಸಭೆಯ ಎಂಜಿನಿಯರ್ ಶಾಸ್ತ್ರಿ ಅವರಿಗೆ ಮಾಹಿತಿ ಫಲಕ ಹಾಕುವಂತೆ ಸೂಚಿಸಿದರು. ನಗರೋತ್ಥಾನ ಯೋಜನೆಯಡಿಯಲ್ಲಿ ₹ 42 ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದೆ, ಇದನ್ನು ಗುತ್ತಿಗೆದಾರರಾದ ಜಮ್ಮಲ ದಿನ್ನಿಯ ಪಾಟೀಲ ಎಂಬುವವರು ಮಾಡುತ್ತಿದ್ದಾರೆ. ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಥರ್ಡ್ ಪಾರ್ಟಿಯವರೂ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಹಾಗೂ ರಸ್ತೆ ಬದಿಗೆ ಹಚ್ಚುವ ಸಣ್ಣ ಪುಟ್ಟ ಒತ್ತು ಗಾಡಿಗಳು ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಅವರಿಗೆ ಬೇರೆ ಕಡೆ ಸ್ಥಳ ನೀಡಬೇಕು ಎಂದು ಸಮಾಜ ಸೇವಕ ಬಾಬು ಬಿರಾದಾರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.