ಆಲಮಟ್ಟಿ: ಜಪಾನ್, ರಷ್ಯಾ, ಚೀನಾದಲ್ಲಿ ಭೂಕಂಪ ಸಂಭವಿಸಿದ್ದನ್ನು ಗಮನಿಸಿದ ಮಲಘಾಣ, ಕಲಗುರ್ಕಿ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಸತತ 25 ಬಾರಿ ಭೂಕಂಪ ಸಂಭವಿಸಿದ ಹಿನ್ನೆಲೆ ಆತಂಕಕ್ಕೆ ಕಾರಣ ಎನ್ನಲಾಗಿದೆ.ಜಪಾನ್, ಚೀನಾದಲ್ಲಿ ಇಂದು ಭೂಕಂಪ ಸಂಭವಿಸಿದ್ದರಿಂದ ಅಲ್ಲಿಯ ಹಾನಿಯ ಕುರಿತೇ ಎಲ್ಲ ದೃಶ್ಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿದ್ದವು. ಅಲ್ಲಿಯ ಅನಾಹುತವನ್ನು ಗಮನಿಸಿದ ಮಲಘಾಣ ಭಾಗದ ಜನತೆಯೂ ಈ ಭಾಗದಲ್ಲಿ ಆಗುತ್ತಿರುವ ಭೂಕಂಪದ ಬಗ್ಗೆ ಆತಂಕಪಟ್ಟರು. ಈ ಭಾಗದ ಜನರಿಗೆ ಭೂಕಂಪವೇ ಚರ್ಚೆಯ ಮುಖ್ಯ ವಿಷಯವಾಗಿತ್ತು. ಗ್ರಾಮಗಳ ಕಟ್ಟೆಗಳಲ್ಲಿ ಕುಳಿತು ಭೂಕಂಪದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲಘಾಣ, ಕಲಗುರ್ಕಿ, ತಳೇವಾಡ, ಮುತ್ತಲದಿನ್ನಿ ಗ್ರಾಮಗಳಲ್ಲಿ ಇಲ್ಲಿಯವರೆಗೆ 25 ಬಾರಿ ಲಘು ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ ಅದು 2ರಿಂದ 3.4ರ ವರೆಗೆ ಭೂಮಿ ಕಂಪನವಾಗಿದೆ. ಅದೇನಾದರೂ ಹೆಚ್ಚಾದರೇ ನಮ್ಮ ಗತಿಯೂ ಜಪಾನ್, ಚೀನಾ ರೀತಿಯಲ್ಲಿಯೇ ಆಗುತ್ತದೆ ಎನ್ನುವ ಭೀತಿ ಶುರುವಾಗಿದ್ದನ್ನು ಗ್ರಾಮಸ್ಥರು ತಿಳಿಸಿದರು.
ಆದರೆ ಇದುವರೆಗೂ ಭೂಕಂಪದಿಂದ ಯಾವುದೇ ಅಪಾಯಕಾರಿ ಘಟನೆಗಳು ಇಲ್ಲಿ ಸಂಭವಿಸಿಲ್ಲ. ಕೆಲ ಸಲ ಮಾತ್ರ ಭೂಕಂಪದಿಂದ ಪತ್ರಾಸು ಅಲುಗಾಡಿದ, ಒಂದೆರೆಡು ಮನೆಗಳು ಬಿರುಕು ಬಿಟ್ಟಿದ್ದು ಹೊರತು ಪಡಿಸಿದರೇ ಅಪಾಯವಾಗಿಲ್ಲ. ಆದರೂ ಇಂದಲ್ಲ ನಾಳೆ ಅಪಾಯ ತಪ್ಪಿದ್ದಲ್ಲ ಎನ್ನುವ ಭಯ ಗ್ರಾಮಸ್ಥರಾದ ಎಂದು ಸುರೇಶ ವಠಾರ, ರಮೇಶಗೌಡ ಪಾಟೀಲ, ಅಶೋಕ ನಿಂಗನೂರ, ಲಕ್ಷ್ಮಣ ಶಿರೋಳ, ಶಂಕರ ಕಲಬುರ್ಗಿ ಹೇಳಿದರು.
ಕರ್ನಾಟಕ ಪ್ರಾಕೃತಿಕ ವಿಕೋಪ ಕೇಂದ್ರದ ರಾಜ್ಯ ನಿರ್ದೇಶಕ ಡಾ. ಪ್ರಕಾಶ ಅವರನ್ನು ಸಂಪರ್ಕಿಸಿದಾಗ, ಅಲ್ಲಿ ನಡೆದಿರುವ ಭೂಕಂಪನದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಇದು ಕೇವಲ ಜಪಾನ್, ರಷ್ಯಾ, ಇಂಡೋನೇಷ್ಯಾ ಭಾಗದಲ್ಲಿ ಮಾತ್ರ ಸಂಭವಿಸಿದೆ. ಕರ್ನಾಟಕಕ್ಕೆ ಅದರ ಪರಿಣಾಮ ಆಗಲ್ಲ. ಅದರಲ್ಲೂ ಮಲಘಾಣ ಭಾಗಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ದೇಶದ ವಿವಿಧ ಭಾಗದ ವಿಜ್ಞಾನಿಗಳು ಆ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.