ADVERTISEMENT

ಜಾತಿ ಜಾಗೃತಿ ಅನ್ಯರಿಗೆ ನೋವಾಗದಿರಲಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:25 IST
Last Updated 7 ಸೆಪ್ಟೆಂಬರ್ 2011, 10:25 IST
ಜಾತಿ ಜಾಗೃತಿ ಅನ್ಯರಿಗೆ ನೋವಾಗದಿರಲಿ
ಜಾತಿ ಜಾಗೃತಿ ಅನ್ಯರಿಗೆ ನೋವಾಗದಿರಲಿ   

ಸಿಂದಗಿ: `ಜಾತಿ ಜಾಗೃತಿ ಸಮಾವೇಶಗಳು ಆಗಾಗ್ಗೆ ನಡೆಯುತ್ತಲೇ ಇರಬೇಕು. ಆದರೆ ಈ ಸಮಾವೇಶಗಳು ಅನ್ಯ ಸಮುದಾಯಕ್ಕೆ ನೋವುಂಟು ಮಾಡದಂತಿರಬೇಕು~ ಎಂದು ಶಾಸಕ ರಮೇಶ ಭೂಸನೂರ ಸಲಹೆ ನೀಡಿದರು.

ಪಟ್ಟಣದಲ್ಲಿ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಹಿತರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ `ಮಾದಿಗರ ಮಹಾ ಜನ ಜಾಗೃತಿ ಸಮಾವೇಶ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಏನೆಲ್ಲ ಸರ್ಕಾರಿ ಯೋಜನೆಗಳನ್ನು ದಲಿತರ ಮನೆ ಬಾಗಿಲಿಗೆ ಮುಟ್ಟಿಸಿದ ಏಕಮೇವ ಸರ್ಕಾರ ಎಂದು ಸಮರ್ಥಿಸಿಕೊಂಡರು.

30 ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ, ಜಗಜೀವನರಾನ ಭವನ, ಸೇವಾಲಾಲ ಭವನ, ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಅಲ್ಲದೇ ದಲಿತ ಸಣ್ಣ ರೈತರಿಗಾಗಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.

ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ದೇಶವನ್ನು ಗೌರವಿಸುವ ಜನ ದೇಶದ ಕಾನೂನನ್ನು ಗೌರವಿಸದಿರುವುದು ಅತ್ಯಂತ ದುರಂತವೇ ಸರಿ ಎಂದು ವಿಷಾದಿಸಿದರು.

ಪಟ್ಟಣದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ. 25 ಲಕ್ಷ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ರಮೇಶ ಭೂಸನೂರ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಮುರಗೆಪ್ಪಗೌಡ ರದ್ದೇವಾಡಗಿ, ದಲಿತ ಮುಖಂಡರಾದ ತಿಪ್ಪಣ್ಣ ಮಾದರ, ಸಮಾವೇಶದ ರೂವಾರಿ ಮಲ್ಲೇಶಿ ಕೆರೂರ, ಅರ್ಜುನ ಗುಡಿಮನಿ, ಎಸ್.ಎಂ. ನಾಯ್ಕೋಡಿ, ರಾಜೂ ಮಾದರ ಮಾತನಾಡಿದರು.

ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿ.ಪಂ. ಸದಸ್ಯ ಯಲ್ಲಪ್ಪ ಹಾದಿಮನಿ, ಈರಗಂಟೆಪ್ಪ ಮಾಗಣಗೇರಿ, ಶ್ರೀಕಾಂತ ಸೋಮಜಾಳ, ಶಿವಾನಂದ ಮಾರ್ಸನಳ್ಳಿ, ಶಂಕ್ರಪ್ಪ ಮಡ್ನಳ್ಳಿ ವೇದಿಕೆಯಲ್ಲಿದ್ದರು.  

ಅವ್ಯವಸ್ಥೆಯ ಆಗರವಾದ ಸಮಾವೇಶ: ಸಮಾವೇಶ ಮುಂಜಾನೆ 10-30 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಶುರು ಆಗಿದ್ದು ಸಂಜೆ 4 ಗಂಟೆಗೆ. ಸಮಾವೇಶದಲ್ಲಿ ಗುಂಡಣ್ಣ(ಕುಡುಕರು)ಗಳ ಹಾವಳಿ ವಿಪರೀತವಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಮುಖರೇ ಬಂದಿರಲಿಲ್ಲ.
ದತ್ತು ಹೊಸಮನಿ ಸ್ವಾಗತಿಸಿದರು. ಸಾಯಿಕುಮಾರ ಬಿಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.