ADVERTISEMENT

ತರಕಾರಿ ಜೊತೆ ಮದ್ಯ ಸಾಗಾಟ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 9:27 IST
Last Updated 20 ಜೂನ್ 2013, 9:27 IST

ವಿಜಾಪುರ: ಮಹಿಳೆಯೊಬ್ಬರು ತರಕಾರಿಯ ಜೊತೆಗೆ 28 ಮದ್ಯದ ಚಿಕ್ಕ ಬಾಟಲ್‌ಗಳನ್ನು ಸಾಗಿಸುವಾಗಿ ಸ್ತ್ರೀ ಶಕ್ತಿ ಸಂಘದವರು ಅದನ್ನು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.

ಮಹಿಳೆ ತರಕಾರಿಯ ಜೊತೆಗೆ ಈ ಮದ್ಯವನ್ನು ಗ್ರಾಮಕ್ಕೆ ತಂದಿದ್ದರು. ಸಂಶಯ ಬಂದು ತಾವು ಅದನ್ನು ಪತ್ತೆ ಹಚ್ಚಿ, ಅಬಕಾರಿ ಇಲಾಖೆಯವರಿಗೆ ಮಾಹಿತಿ ನೀಡಿದೆವು ಎಂದು ಸ್ತ್ರಿಶಕ್ತಿ ಸಂಘದವರು ತಿಳಿಸಿದ್ದಾರೆ.

ಸ್ತ್ರೀಶಕ್ತಿ ಸಂಘದ ಮಾತಾಜಿ ಚಿಕ್ಕರೆಡ್ಡಿ, ಶಂಕ್ರಮ್ಮ ಜಾರೆಡ್ಡಿ, ಸಿದ್ದಮ್ಮ ಲಿಂಗದಳ್ಳಿ, ಮಲ್ಲಮ್ಮ ಕೌಲಗಿ ಮತ್ತಿತರರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಸಂಘದವರು ಹೇಳಿದ್ದಾರೆ.

ಆದರೆ, `ಸಾರವಾಡ ಗ್ರಾಮದಲ್ಲಿ ದಾಳಿ ನಡೆಸಿ 5.4 ಲೀಟರ್ ಮದ್ಯ ವಶಪಡಿಸಿಕೊಂಡು ದುಂಡವ್ವ ರಂಗಪ್ಪ ಕರ್ಜಗಿ ಎಂಬ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ' ಎಂದು ಅಬಕಾರಿ ಉಪ ಆಯುಕ್ತ ಬಸವರಾಜ ಎಸ್. ತಿಳಿಸಿದ್ದಾರೆ!

ವಶಪಡಿಸಿಕೊಂಡ ಮದ್ಯದ ಮೌಲ್ಯ ರೂ 1,500 ಇದ್ದು, ಅಬಕಾರಿ ಉಪ ನಿರೀಕ್ಷಕ ರಾಜು ಎಚ್. ಗೊಂಡೆೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಪಿ.ಎಸ್ ಪೀಡಕರ, ಅಬಕಾರಿ ರಕ್ಷಕರಾದ ವಿ.ಎಸ್. ಮಮದಾಪೂರ, ಗಂಗೂಬಾಯಿ ಕಟ್ಟಿಮನಿ, ವಾಹನ ಚಾಲಕ ಬಿ.ವೈ. ಬಜಂತ್ರಿ ಭಾಗವಹಿಸಿದ್ದರು ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.