ADVERTISEMENT

ತಾಲ್ಲೂಕಿಗೆ ರೂ.5 ಕೋಟಿ: ಯಡಿಯೂರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 9:15 IST
Last Updated 6 ಏಪ್ರಿಲ್ 2012, 9:15 IST

ವಿಜಾಪುರ: ಕೆರೆ-ಕಟ್ಟೆಗಳ ಹೂಳು ತೆಗೆಯಲು ರಾಜ್ಯ ಸರ್ಕಾರ ತಕ್ಷಣವೇ ತಾಲ್ಲೂಕಿಗೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಸಚಿವರು, ಶಾಸಕರು ಬೆಂಗಳೂರಿಗೆ ಹೋಗುವುದನ್ನು ಬಿಟ್ಟು, ವೈಯಕ್ತಿಕ-ರಾಜಕೀಯ ವೈಷಮ್ಯ ಮರೆತು ಜನರ ನೆರವಿಗೆ ಧಾವಿಸಬೇಕು. ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು. ರಾಜ್ಯದ ಮುಖ್ಯ ಕಾರ್ಯದರ್ಶಿಯೂ ರಾಜ್ಯ ಪ್ರವಾಸ ಕೈಗೊಳ್ಳಬೇಕು....

ಬರ ಪರಿಸ್ಥಿತಿಯ ಅಧ್ಯಯನಕ್ಕೆ ಗುರುವಾರ ಜಿಲ್ಲೆಗೆ ಆಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿಕೊಂಡ ಮನವಿ ಇದು.

`ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ಆದರೂ, ಜನತೆಗೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ. ಜನ ಸಂಕಷ್ಟದಲ್ಲಿದ್ದಾಗ ಮೌನವಾಗಿರುವುದು ನನಗೆ ಶೋಭೆ ತರುವುದಿಲ್ಲ. ಜನತೆಯ ಅಪೇಕ್ಷೆ ಹಾಗೂ ನನ್ನ ಕರ್ತವ್ಯ ಪಾಲನೆಗಾಗಿ ಈ ಪ್ರವಾಸ ಕೈಗೊಂಡಿದ್ದೇನೆ~ ಎಂದರು.

`ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ರೂಪಿಸಿದ ಮಾದರಿಯಲ್ಲಿಯೇ ಬರ ಪರಿಹಾರದ ಶಾಶ್ವತ ಕೆಲಸವನ್ನೂ ಮಾಡಬೇಕಿದೆ. ಕೆರೆ-ಕಟ್ಟೆಗಳಲ್ಲಿಯ ಹೂಳು ತೆಗೆದರೆ ಅಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಈ ಕಾರ್ಯಕ್ಕಾಗಿ ನಾನು ತಾಲ್ಲೂಕಿಗೆ ಐದು ಕೋಟಿ ಕೊಟ್ಟಿದ್ದೆ. ರಾಜ್ಯ ಸರ್ಕಾರವೂ ಈ ಕಾರ್ಯಕ್ಕೆ ತಕ್ಷಣ ಪ್ರತಿ ತಾಲ್ಲೂಕಿಗೆ ಐದು ಕೋಟಿ ಕೊಡಬೇಕು~ ಎಂದು ಸಲಹೆ ನೀಡಿದರು.

`ವಿಜಾಪುರ ನಗರದ ಅಭಿವೃದ್ಧಿಗೆ ನಾವು 100 ಕೋಟಿ ವಿಶೇಷ ಅನುದಾನ ಕೊಟ್ಟಿದ್ದೇವೆ. ಆದರೆ, ಕೆಲಸ ಮಾತ್ರ ಇನ್ನೂ ವಿಳಂಬವಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ರಾಯಚೂರು, ಬೀದರ್, ಗುಲ್ಬರ್ಗ ಜಿಲ್ಲೆಗಳ ಪ್ರವಾಸ ಮುಗಿಸಿಕೊಂಡು ಇದೇ 9ರಂದು ಈ ಭಾಗದ ಬರಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮತ್ತೊಂದು ವಾರದಲ್ಲಿ ಎರಡನೇ ಸುತ್ತಿನ ಪ್ರವಾಸ ಕೈಗೊಳ್ಳುತ್ತೇನೆ~ ಎಂದರು.

`ಬರ ಪರಿಹಾರಕ್ಕಾಗಿ ರೂ.2600 ಕೋಟಿ ಕೊಡುವಂತೆ ನಮ್ಮ ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೊದಲ ಕಂತಾಗಿ ಕೇಂದ್ರ ಸರ್ಕಾರ ತಕ್ಷಣ 500 ಕೋಟಿ ಬಿಡುಗಡೆ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿರುವ 400 ಕೋಟಿ ರೂಪಾಯಿಯನ್ನೂ ಬಿಡುಗಡೆ ಮಾಡಬೇಕು~ ಎಂದು ಆಗ್ರಹಿಸಿದರು.

`ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿಯ ಅರಿವಿಲ್ಲ. ಅಧಿವೇಶನ ಮುಗಿದ ತಕ್ಷಣ ಅವರು ರಾಜ್ಯ ಪ್ರವಾಸ ಕೈಗೊಳ್ಳಬೇಕಿತ್ತು. ಕರ್ತವ್ಯ ಮರೆತ ವ್ಯಕ್ತಿಯಿಂದ ನಾನು ಪಾಠ ಕಲಿಯಬೇಕಿಲ್ಲ~  ಎಂದು ತಿರುಗೇಟು ನೀಡಿದರು.

ವಿಜಾಪುರ ಭೇಟಿ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಬರ ಪೀಡಿತ ಪ್ರದೇಶಗಳಿಗೆ ಏಕೆ ಭೇಟಿ ನೀಡಲಿಲ್ಲ ಎಂದೂ ಪ್ರಶ್ನಿಸಿದರು.

`ಕಳಕಳಿಯಿಂದ ರಾಜ್ಯ ಪ್ರವಾಸ ಮಾಡುತ್ತಿರುವ ನನ್ನ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುತ್ತಿರುವುದು ಕಲಿಗಾಲದ ಮಹಿಮೆ~ ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ವಿಠ್ಠಲ ಕಟಕಧೋಂಡ, ರಮೇಶ ಭೂಸನೂರ, ಸಿದ್ದು ಸವದಿ ಹಾಗೂ ಎಂ.ಡಿ. ಲಕ್ಷ್ಮಿನಾರಾಯಣ, ಶಿವಾನಂದ ಕಲ್ಲೂರ, ಬಸವರಾಜು ಮುಕರ್ತಿಹಾಳ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.