ತಾಳಿಕೋಟೆ: ಪಟ್ಟಣದಲ್ಲಿ ಹಾಗೂ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಭಾರಿ ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಸಮೀಪದ ಮೂಕಿಹಾಳ ಬಳಿ ಹರಿಯುವ ಸೊಗಲಿ ಹಳ್ಳಕ್ಕೆ ಪ್ರವಾಹ ಬಂದು ಸುಮಾರು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.
ಸಂಜೆ ನಾಲ್ಕು ಗಂಟೆಗೆ ಆರಂಭವಾದ ಮಳೆ ಸುಮರು ಎರಡು ಗಂಟೆಗೂ ಅಧಿಕ ಕಾಲ ಸುರಿಯಿತು. ಸೋಗಲಿ ಹಳ್ಳದ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕ ಮಳೆಯಾದ ಕಾರಣ ಸೋಗಲಿ ಹಳ್ಳಕ್ಕೆ ದೀಢೀರ್ ಪ್ರವಾಹ ಬಂದಿದೆ. ವಿಜಾಪುರ ಮಾರ್ಗದಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಡೋಣಿ ಸೇತುವೆ ಶಿಥಿಲಗೊಂಡಿದ್ದು ಕಳೆದ ಒಂದು ತಿಂಗಳಿಂದ ಮುದ್ದೇಬಿಹಾಳ, ವಿಜಾಪುರದತ್ತ ಹೋಗುವ ಬಾರಿ ವಾಹನಗಳು ಹಾಗೂ ಬಸ್ಗಳು ಹಡಗಿನಾಳ, ಮೂಕಿಹಾಳ ಮಾರ್ಗದಲ್ಲಿ ಸಂಚರಿಸುತ್ತಿವೆ. ಸೋಗಲಿ ಪ್ರವಾಹದಿಂದ ರಸ್ತೆ ಸಂಚಾರ ವ್ಯತ್ಯಯವಾದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಕೆಲ ಬಸ್ಗಳು ಅಪಾಯಕಾರಿಯಾಗಿರುವ ಶಿಥಿಲಗೊಂಡ ಸೆತುವೆಯ ಮೇಲೆ ಮತ್ತೆ ಇಂದು ಸಂಚಾರ ಆರಂಭಿಸಿವೆ.
ಡೋಣಿ ಸೇತುವೆ ಶಿಥಿಗೊಂಡಿದ್ದು ಸೋಗಲಿ ಹಳ್ಳದ ರಸ್ತೆ ಮಳೆಗಾಲದಲ್ಲಿ ಸಂಚರಿಸಲು ಯೋಗ್ಯವಲ್ಲದ ರಸ್ತೆ ಎಂದು ತಿಳಿದಿದ್ದರೂ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ, ಡೋಣಿ ನದಿ ಮೇಲಿನ ದೊಡ್ಡ ಸೇತುವೆಯನ್ನು ದುರಸ್ತಿ ಮಾಡದೇ, ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಟ್ಟಣದ ಕವೀ ಫೌಂಡೆಶನ್ನ ಸಂಸ್ಥಾಪಕ ವೀರೇಶ ಕೋರಿ ಆಗ್ರಹಿಸಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತ ಭಾರಿ ಪ್ರಮಾಣದ ಮಳೆಯಿಂದ ಜಮೀನಿಗಳಲ್ಲಿ ನೀರು ಹರಿದಾಡಿತಲ್ಲದೇ ಒಡ್ಡು-ವಾರಿಗಳು ತುಂಬಿಕೊಂಡಿವೆ. ಬಿತ್ತನೆಗೆ ಅಗತ್ಯ ಮಳೆ ಬಂದಿರುವುದರಿಂದ ರೈತಾಪಿಗಳು ಹರ್ಷಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.