ADVERTISEMENT

ಭಾವಚಿತ್ರ ಗೊಂದಲ: ತಹಶೀಲ್ದಾರ್‌ಗೆ ಸಾರ್ವಜನಿಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 8:00 IST
Last Updated 15 ಜುಲೈ 2012, 8:00 IST

ತಾಳಿಕೋಟೆ: ತಾತ್ಕಾಲಿಕ ಪಡಿತರ ಚೀಟಿಗೆ ಸಂಬಂಧಿಸಿದಂತೆ ಭಾವಚಿತ್ರ ತೆಗೆಸುವಲ್ಲಿ ಉಂಟಾಗಿರುವ ಗೊಂದಲ ಗಳನ್ನು ಪರಿಹರಿಸಿ ನ್ಯಾಯ ಒದಗಿಸು ವಂತೆ ಆಗ್ರಹಿಸಿ ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ತಹಶೀಲ್ದಾರ ಸೋಮಲಿಂಗ ಗೆಣ್ಣೂರ ಅವರನ್ನು ಮುತ್ತಿಗೆ ಹಾಕಿ ಆಗ್ರಹಿಸಿದರು.

ಕಳೆದ ವರ್ಷ ತಾತ್ಕಾಲಿಕ ಪಡಿತರ ಚೀಟಿ ಪಡೆಯುವಾಗ ಭಾವಚಿತ್ರಕ್ಕಾಗಿ 40 ರೂಪಾಯಿ ನೀಡಲಾಗಿದೆ. ಭಾವಚಿತ್ರಗಳನ್ನು ಸಹ ಪಡೆಯಲಾಗಿದೆ. ಈಗ ಕಾಯಂ ಪಡಿತರ ಚೀಟಿ ಒದಗಿಸುವಂತೆ ಕೋರಿದರೆ  ತಹಶೀಲ್ದಾರ ಕಚೇರಿಯ ಸಿಬ್ಬಂದಿ ಹೊಸದಾಗಿ ಭಾವಚಿತ್ರ ತೆಗೆಸಬೇಕು ಎನ್ನುತ್ತಾರೆ.
 
ಈಗ ಭಾವಚಿತ್ರ ತೆಗೆಸಲು ಹೋದರೆ ಆದಾಯ ಪ್ರಮಾಣಪತ್ರ ಕೇಳುತ್ತಾರೆ. ಇವೆಲ್ಲ ಗೊಂದಲಗಳು ಪರಿಹಾರವಾಗಲು ಮತ್ತೆ ಮುನ್ನೂರಷ್ಟು ಹಣ ಬೇಕು. ಈಗಲೇ ಬರಗಾಲದಿಂದ ಕೂಲಿ ಸಿಗದೆ ಪರದಾಡುತ್ತಿರುವ ಜನತೆ ಈ ಹಣವನ್ನು ಎಲ್ಲಿಂದ ಹೊಂದಿಸಬೇಕು.
 
ಅದಕ್ಕಾಗಿ ಹೊಸದಾಗಿ ಭಾವಚಿತ್ರ ತೆಗೆಸುವ ಅವಾಂತರದಿಂದ ಮುಕ್ತಿಗೊಳಿಸಿ ನಮಗೆ ಹೊಸದಾಗಿ ಪಡಿತರ ಚೀಟಿ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಜನತೆಯ ಮಾತನ್ನು ಆಲಿಸಿ ಮಾತನಾಡಿದ ತಹಶೀಲ್ದಾರ ಸೋಮಲಿಂಗ ಗೆಣ್ಣೂರ,  ಅಗತ್ಯ ಕ್ರಮದ ಭರವಸೆ ನೀಡಿದರಲ್ಲದೇ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವ ಭರವಸೆ ನೀಡಿದರು.

ಭಾವಚಿತ್ರ ತೆಗೆಸಲು ಖಾಸಗಿಯವರಿಗೆ ವಹಿಸಿಕೊಡಲಾಗಿತ್ತು. ಈ ಭಾವ ಚಿತ್ರಗಳು ಗಣಕಯಂತ್ರದಲ್ಲಿ ಲಭ್ಯವಿದ್ದರೆ ಅದನ್ನು ಸರಿಪಡಿಸಲಾಗುವುದು ಆದರೆ ಪಡಿತರ ಚೀಟಿಯಲ್ಲಿ ಶ್ರಿಮಂತರು ಸೇರಿಕೊಂಡ ಶಂಕೆ ಇದೆ.

ಇದರಿಂದ ನಿರ್ಗತಿಕರು, ಅರ್ಹರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಆದ್ದರಿಂದ ಸೋಮವಾರ ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವವರು ಅದರ ಜೆರಾಕ್ಸ್ ಪ್ರತಿಯನ್ನು ವಿಶೇಷ ತಹಶೀಲ್ದಾರರಿಗೆ ಒಪ್ಪಿಸಬೇಕು. 

ಪಡಿತರ ಚೀಟಿದಾರರ ಮನೆಗೆ ಬಂದು ಕಂದಾಯ ಇಲಾಖೆಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು  ಪರಿಶೀಲಿಸುತ್ತಾರೆ. ಈ ಸಂದರ್ಭದಲ್ಲಿ ತಾತ್ಕಾಲಿಕ ಪಡಿತರ ಚೀಟಿ ಹೊಂದಿ ದವರು ಶ್ರಿಮಂತರೆಂದು ಕಂಡು ಬಂದರೆ ಅವರ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆನೀಡಿದರು.  

 ವಿಶೇಷ ತಹಶೀಲ್ದಾರ ಎಂ.ಎ.ಎಸ್.ಬಾಗವಾನ, ಗ್ರಾಮ ಲೆಕ್ಕಿಗ ಪಿ.ಎಸ್.ಹುಡೇದ, ರಾಘವೇಂದ್ರ ಸುರಪುರ, ಯಮನಾ ಬಾಯಿ ರಾಜಪುರಿ, ಮುಬಾರಕ ಮಕಾನದಾರ, ಶ್ರಿಮಂತ ಮೋಟಗಿ, ಸಾಬವ್ವ ತಳವಾರ, ಎಂ.ಪಿ. ಮನಗೂಳಿ, ಕೆ.ಎಸ್. ಬಾಗೆವಾಡಿ, ಮಹಾದೇವಿ ಬಡದಾಳೆ, ಶಾಂತಾ ಬಾಯಿಪವಾರ, ಜಿ.ಪಿ.ದಡೇಧ ಮೊದಲಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.