ADVERTISEMENT

ಮುಂಗಾರು ತೊಟ್ಟಿಲಿಟ್ಟು ತೂಗೈತಲೇ...

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 7:05 IST
Last Updated 10 ಜೂನ್ 2013, 7:05 IST

ತಾಳಿಕೋಟೆ: `ನನ್ನ ಮರತು ನಡದವಗ ಭೂಲೋಕಕ್ಕ ತುಳದಿನಲೇ, ಮುಂಗಾರಿ ತೊಟ್ಟಿಲಿಟ್ಟು ತೂಗೈತಲೇ, ಹಿಂಗಾರಿ ಹಿಂದಿನಿಂದ ಕೊಟ್ಟಿನಲೇ' ಎಂದು  ಸಮೀಪದ ಚಬನೂರನಲ್ಲಿ  ಅಮಾವಾಸ್ಯೆಯ ರಾತ್ರಿ  (ಭಾನುವಾರ ಬೆಳಗಿನ ಜಾವ 4.30ಕ್ಕೆ) ಅಮೋಘಸಿದ್ಧೇಶ್ವರ ಹೇಳಿಕೆ ಯಾಯಿತು.

ಮುಂಗಾರು ಹಾಗೂ ಹಿಂಗಾರು ಉತ್ತಮವಾಗುತ್ತವೆ ಎನ್ನುವ ದೇವರ ಹೇಳಿಕೆ ಯಿಂದ ಖುಷಿಗೊಂಡ ಜಾತ್ರೆಗೆ ಆಗಮಿಸಿದ್ದ ರಾಜ್ಯದ ನಾನಾಭಾಗದ ಭಕ್ತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ತಮ್ಮ ಗ್ರಾಮಗಳಿಗೆ ತೆರಳಿದರು.

ಜಾತ್ರಾ ಮಹೋತ್ಸವಕ್ಕೆ ಮುನ್ನ ಐದು ದಿನಗಳ ಹಿಂದೆ ವಿಜಾಪುರಕ್ಕೆ ಬರಿಗಾಲಲ್ಲಿ ಹೋಗಿ ಹೂವು ತಂದ ಹಿರೇಕುರುಬರ ಮನೆತನದವರನ್ನು ಗ್ರಾಮದ ಹನಮಂತದೇವರ ದೇವಸ್ಥಾನದಿಂದ ಗೌಡರ ಮನೆಯವರೆಗೆ ಕಳಸ, ಡೊಳ್ಳಿನ ವಾಲಗದೊಂದಿಗೆ ಸ್ವಾಗತಿಸಿ ಗಂಗಸ್ಥಲ ಮುಗಿಸಲಾಯಿತು. ಅಲ್ಲಿಂದ ದೇವ ಸ್ಥಾನಕ್ಕೆ ತೆರಳಿ ದೇವರ ಮುಖವಾಡ ಹೊತ್ತು ಹೊರಬಂದ ಒಡೆಯರ ಮನೆತನದವರು ಹೇಳಿಕೆ ನೀಡಿದರು.

ಇದಕ್ಕೂ ಮುನ್ನ ಜಾತ್ರೆಯ ವಿಶೇಷವೆನಿಸಿರುವ ಕೈಚಕ್ಕಳಿಯ ಸವಿಯನ್ನು ಆಗಮಿಸಿದ್ದ ಭಕ್ತಾದಿಗಳು ಸವಿದರು. ಜಾತ್ರಾ ಮಹೋತ್ಸವದಲ್ಲಿ ಸಿದ್ದುಮುತ್ಯಾ ಒಡೆಯರ, ಬಸನಗೌಡ ಲಿಂಗದಳ್ಳಿ(ಪಾಟೀಲ), ಮಲ್ಲಣ್ಣ ಒಡೆಯರ, ಪ್ರಕಾಶ ಒಡೆಯರ, ಶಿವಗೌಡ ಪಾಟೀಲ,  ಬಸವರಾಜ ಕಲಕೇರಿ, ಮುತ್ತುಗೌಡ ಯಾಳವಾರ,ಕಾಳಪ್ಪ ಬಡಿಗೆರ ಮೊದಲಾವರಿದ್ದರು.

ಉಚಿತ ನೇತ್ರ ತಪಾಸಣಾ ಶಿಬಿರ: ಪ್ರತಿ ವರ್ಷದಂತೆ ಈ ಬಾರಿಯೂ ಅಮೋಘಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಚಬನೂರ ಗ್ರಾಮದ ಆರೋಗ್ಯ ಇಲಾಖೆಯಲ್ಲಿ ವಿಜಾಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞ ಉಚಿತವಾಗಿ ನೇತ್ರ ತಪಾಸಣೆ ನಡೆಸಿದರು. ಸತತವಾಗಿ ಇದು 13ನೇ ವರ್ಷ ಶಿಬಿರವಾಗಿದ್ದು ಇಲ್ಲಿ 652 ಜನರ ನೇತ್ರ ತಪಾಸಣೆಗೆ ಒಳಗಾದರು. ಇವರಲ್ಲಿ 100 ಅರ್ಹ ಫಲಾನು ಭವಿಗಳಿಗೆ ಅನುಗ್ರಹ ಆಸ್ಪತ್ರೆಯಲ್ಲಿ ಉಚಿತವಾಗಿ ಶಶ್ತ್ರ ಚಿಕಿತ್ಸೆ ಮಾಡು ವುದಾಗಿ ಡಾ. ಪ್ರಭುಗೌಡ ತಿಳಿಸಿದರು.

ದತ್ತಾತ್ರೇಯ ಸಾಲಿಮಠ, ಹನ್ಮಂತ  ಕೊಂಡಗೂಳಿ, ಶರಣು ಕೊಂಡಗೂಳಿ, ಮಲ್ಲಿಕಾರ್ಜುನ ಹಿಪ್ಪರಗಿ, ಪವನ ಕುಮಾರ ಯರಗಲ್ಲ, ಪ್ರಕಾಶ ಗಡೇದ, ಮಲ್ಲು ಗಡೇದ, ವೀರೇಶ ಜನ್ನುಡಿ ಬಸು ಯಾಳವಾರ ಮೈಬೂಬ, ರಾಜು ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.