ವಿಜಯಪುರ: ‘ಕೇಂದ್ರ–ರಾಜ್ಯ ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿ ಯಿಂದಾಗಿ, ಬೆಲೆ ಅಸಮತೋಲನವಾಗಿ ರೈತ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಾಬಾಗೌಡ ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ರೈತ ಚಿಂತನಾ ಸಮಾವೇಶ, ನಗರ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತ ನಾಡಿದ ಅವರು, ‘ರೈತರ ಸಂಕಷ್ಟಕ್ಕೆ ಸರ್ಕಾರಗಳೇ ಹೊಣೆಯಾಗಿದ್ದರಿಂದ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
‘ಮಾನವೀಯತೆಯಿಂದ ದುಡಿದು ದೇಶಕ್ಕೆ ಅನ್ನ ಹಾಕುವುದು ರೈತನ ಸಂಸ್ಕೃತಿ. ಬೆಳೆಗಳಲ್ಲಿ ಪೌಷ್ಟಿಕಾಂಶ ಕಡಿಮೆಯಾಗಿ, ಅಪೌಷ್ಟಿಕತೆಯಿಂದ ಜನ ಬಳಲುತ್ತಿದ್ದಾರೆ. ಈ ಕುರಿತು ಯೋಚಿಸಿ ಆರೋಗ್ಯ ಸಂಪತ್ತನ್ನು ರೈತ ಕಾಪಾಡಿಕೊಳ್ಳಬೇಕಿದೆ.
ಮಹಾನ್ ತತ್ವಜ್ಞಾನಿ ಮ್ಯಾಕ್ಸ್ ಮುಲ್ಲರ್ ಹೇಳಿದಂತೆ ಎಲ್ಲ ರೀತಿಯ ಬೆಳೆ ಬೆಳೆಯುವ ಭಾರತ, ವಿಶ್ವದ ಸ್ವರ್ಗ ವಾಗಿದೆ. ನಮ್ಮ ಮೊದಲ ಆದ್ಯತೆ ಕೃಷಿಗೆ ನೀಡಬೇಕಿದೆ. ಲಂಚಕೋರ, ಆಡಳಿತಾ ರೂಢ ಸರ್ಕಾರ ಬಹು ರಾಷ್ಟ್ರೀಯ ಕಂಪೆನಿಗಳ ಹೈಬ್ರೀಡ್ ಬೀಜಗಳ ಮಾರಾಟ’ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
‘ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಸಲುವಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧರಣಿ ಸ್ಥಳಕ್ಕೆ ಭೇಟಿ ನೀಡಿ, ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡಲು ಅಧಿವೇಶನದಲ್ಲಿ ಚರ್ಚಿಸುವ ಭರವಸೆ ನೀಡಿದ್ದರು.
ಇದರ ಜತೆಗೆ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದ ವಿಷಯ ಗಮನಕ್ಕೆ ತರಲಾಗಿತ್ತು. ಕಾನೂನು ತಜ್ಞರನ್ನು ಕರೆಸಿ ಕೂಡಲೇ ನಿರ್ಣಯ ತೆಗೆದುಕೊಳ್ಳಲಾ ಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿರುವುದನ್ನು ನೋಡಿ ದರೇ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುವುದು ಕಂಡು ಬರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎನ್.ಎಸ್.ಖೇಡ, ನಿರ್ಮಲಾಕಾಂತ ಪಾಟೀಲ, ಸಿದ್ರಾಮಪ್ಪ ರಂಜಣಗಿ ಮಾತನಾಡಿದರು. ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಶ್ರೀಮಂತ ಕಾಪಸೆ, ಬಿ.ಆರ್.ಪವಾರ, ಗೌಡಪ್ಪಗೌಡ ಮೈಗೂರ, ಬಾಪುಗೌಡ ಬಿರಾದಾರ, ಪಾಂಡು ಹ್ಯಾಟಿ, ಎಂ.ರಾಮಚಂದ್ರ ಬಮ್ಮನಜೋಗಿ, ಈರಣಗೌಡ ಪಾಟೀಲ, ಶ್ರೀಶೈಲ ಪಾಟೀಲ ಉಪಸ್ಥಿತರಿದ್ದರು.
ರವೀಂದ್ರ ಕರ್ಪೂರಮಠ ಸ್ವಾಗತಿಸಿದರು. ಈರಣ್ಣ ಸಜ್ಜನ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.