ADVERTISEMENT

ರೋಡ್ ಶೋ ಪಕ್ಷದ ಅಭ್ಯರ್ಥಿಯ ಗೆಲುವಿನ ಸಂಕೇತ: ಯಾದವ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:48 IST
Last Updated 28 ಏಪ್ರಿಲ್ 2018, 13:48 IST

ವಿಜಯಪುರ: ಸದ್ಯ ಚುನಾವಣೆ ಸಮಯ ಇರುವುದರಿಂದ ರೋಡ್ ಶೋ ಜನರಲ್ಲಿ ಹೆಚ್ಚಿನ ಪ್ರಭಾವ ಬೀರಲಿದ್ದು, ಇದು ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಸಂಕೇತವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ ಹೇಳಿದರು.

ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್ ಶೋ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ನಡೆದ ಎಲ್ಲ ರಾಜ್ಯಗಳ ಚುನಾವಣೆಗಳಲ್ಲಿ ನಡೆದ ರೋಡ್ ಶೋಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಅಮಿತ ಷಾ, ನರೇಂದ್ರ ಮೋದಿ, ಯೋಗಿ ಆಧಿತ್ಯನಾಥ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಭಾಗಿಯಾದ ಪರಿಣಾಮ ಪೂರ್ಣ ಬಹುಮತದಿಂದ ಅಧಿಕಾರ ಸ್ಥಾಪಿಸಲು ಯಶಸ್ವಿಯಾಗಿದ್ದೇವೆ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತ ಸಿದ್ದ. ಶನಿವಾರ ನಡೆಯುವ ಅಮೀತ್‌ ಶಾ ರೋಡ್ ಶೋ ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದಲ್ಲಿ ಬಿಜೆಪಿಯ ಎಲ್ಲ ಪದಾಧಿಕಾರಿಗಳು ತಮ್ಮ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಕೂಡ ಪ್ರತಿ ಬಡಾವಣೆಗೆ ತೆರಳಿ ಸಾರ್ವಜನಿಕರಿಗೆ ಭೇಟಿಯಾಗಿ ಮತ ಯಾಚನೆ ಮಾಡುತ್ತಿದ್ದೇನೆ. ಬರುವ ದಿನಗಳಲ್ಲಿ ಜಿಲ್ಲೆಯ ಎಂಟೂ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ, ಬಿಎಸ್‌ವೈ ಮುಖ್ಯಮಂತ್ರಿ ಆಗಲು ಕೈಜೋಡಿಸಲಾಗುವುದು ಎಂದರು.

ಚುನಾವಣಾ ಉಸ್ತುವಾರಿ ಸತ್ಯಕುಮಾರ, ಶಿವರುದ್ರ ಬಾಗಲಕೋಟ, ಅಶೋಕ ಅಲ್ಲಾಪೂರ, ರವಿಕಾಂತ ಬಗಲಿ, ವಿವೇಕ ಡಬ್ಬಿ, ಆರ್.ಎಸ್.ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಸಂಗೀತಾ ಪೋಳ, ರಾಜೇಶ ದೇವಗಿರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.