ADVERTISEMENT

ವೀರಭದ್ರೇಶ್ವರ ಕಾರ್ತಿಕೋತ್ಸವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:15 IST
Last Updated 12 ಡಿಸೆಂಬರ್ 2013, 6:15 IST
ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ನೀಲಕಂಠೇಶ್ವರ ದೇವರ ಕಳಸದ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ನೀಲಕಂಠೇಶ್ವರ ದೇವರ ಕಳಸದ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ಜರುಗಿತು.   

ಬಸವನಬಾಗೇವಾಡಿ: ತಾಲ್ಲೂಕಿನ ಮುತ್ತಗಿ ಗ್ರಾಮದ ನೀಲಕಂಠೇಶ್ವರ ದೇವರ ಕಳಸಾರೋಹಣ ಹಾಗೂ ವೀರಭದ್ರೇಶ್ವರ ಕಾರ್ತಿಕ ಮುಕ್ತಾಯ ಸಮಾರಂಭ ಭಾನುವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ನೀಲಕಂಠೇಶ್ವರ ಕರ್ತೃ ಗದ್ದುಗೆಗೆ ನಾಗಾವಿ ಗ್ರಾಮದ ಮಲ್ಲಯ್ಯಸ್ವಾಮಿ ಹಿರೇಮಠ ಇವರಿಂದ ರುದ್ರಾಭೀಷೇಕ, ಬಿಲ್ವಾರ್ಚನೆ ನಡೆಯಿತು.

ನಂತರ ದೇವಾಲಯದಿಂದ ಕಳಸದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ನೀಲಕಂಠೇಶ್ವರ ದೇವಾಲಯಕ್ಕೆ ಆಗಮಿಸಿತು, ನಂತರ ಕಳಸಾರೋಹಣ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ವೀರಭದ್ರೇಶ್ವರ ದೇವರಿಗೆ ರುದ್ರಾಭೀಷೇಕ, ಎಲೆಪೂಜೆ, ಪುರವಂತರ ಸೇವೆ ನಡೆಯಿತು, ನಂತರ ದೀಪೋತ್ಸವ ಮೂಲಕ ಕಾರ್ತಿಕ ಮುಕ್ತಾಯ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮದ್ದು ಸುಡುವ ಕಾರ್ಯಕ್ರಮ ಜರುಗಿತು.

ಕಳಸದ ಮೆರವಣಿಗೆಯಲ್ಲಿ ಬಿ.ಎಂ.ಮುಂಡಾಸ, ಮಹಾದೇವಪ್ಪ ಹೊಸಮನಿ, ಸಿದ್ರಾಮಪ್ಪ ಮುಂಡಾಸ, ಸೋಮ ಲಿಂಗ ಹೊಸಮನಿ, ಶಂಕರಯ್ಯ ಕಂಬಿಮಠ, ಶ್ರೀಶೈಲ ಹಾದಿಮನಿ, ದೇವೆಂದ್ರ ಹೊಸಮನಿ, ಮುತ್ತು ಮುಂಡಾಸ, ಸಂಗಮೇಶ ಸೇರಿದಂತೆ ಮುಂತಾದವರು  ಭಾಗವಹಿಸಿದ್ದರು.

ಮುಖ್ಯಶಿಕ್ಷರಿಗೆ ತರಬೇತಿ ಇಂದು
ಸಿಂದಗಿ:
ವಿಜಾಪುರ ನಗರದ ಬಿ.ಎಲ್.ಡಿ.ಇ ಅಡಿಟೋರಿಯಮ್‌ನಲ್ಲಿ ಜಿಲ್ಲೆಯ ಎಲ್ಲ ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷರಿಗೆ ಒಂದು ದಿನದ ಆರ್.ಟಿ.ಇ ಕಾಯ್ದೆ ಮತ್ತು ಬಾಲ ನ್ಯಾಯಾಲಯ ಕುರಿತಾಗಿ ಇದೇ 12ರಂದು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಸಂಬಂಧಿಸಿದ ಎಲ್ಲ ಶಾಲೆಗಳ  ಮುಖ್ಯಗುರುಗಳು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎ.ಮುಜಾವರ ತಿಳಿಸಿದ್ದಾರೆ.

ಪ್ರವಚನಕ್ಕೆ ಬಸ್‌ ಬಿಡಲು ಮನವಿ
ಆಲಮೇಲ:
ಇಂಡಿಯಲ್ಲಿ ಜರುಗುತ್ತಿರುವ ಸಿದ್ಧೇಶ್ವರ ಶ್ರೀಗಳ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ, ಭಕ್ತರಿಗೆ ಅನುಕೂಲ ವಾಗುವಂತೆ ಸಿಂದಗಿ ಪಟ್ಟಣದಿಂದ ಬಸ್‌ ಓಡಿಸಬೇಕೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿವು ಗುಂದಗಿ ವಿನಂತಿಸಿದ್ದಾರೆ.

ಕಳೆದ ತಿಂಗಳು 28ರಿಂದ ಬೆಳಿಗ್ಗೆ 6.30ಕ್ಕೆ ಆರಂಭವಾಗುವ ಪ್ರವಚನಕ್ಕೆ ಆಲಮೇಲ ಹಾಗೂ ಸಿಂದಗಿ ಪಟ್ಟಣದಿಂದ ಬಹಳಷ್ಟು ಜನರು ಹೋಗುತ್ತಿದ್ದಾರೆ. ಇದೇ 28ರವರೆಗೆ ಪ್ರವಚನ ನಡೆಯುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಸಿಂದಗಿ ಡಿಪೋದಿಂದ ಬೆಳಿಗ್ಗೆ ಬಸ್‌ ಓಡಿಸಿದರೆ ಅನೂಕೂಲವಾಗುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಇಲಾಖೆ ಸ್ಪಂದಿಸಿದಂತೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT