ADVERTISEMENT

ಶಾಲೆಗಳ ವಿಲೀನ ಬಿಡಿ; ಶಿಕ್ಷಕರನ್ನು ನೇಮಿಸಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2011, 5:55 IST
Last Updated 9 ನವೆಂಬರ್ 2011, 5:55 IST
ಶಾಲೆಗಳ ವಿಲೀನ ಬಿಡಿ; ಶಿಕ್ಷಕರನ್ನು ನೇಮಿಸಿ
ಶಾಲೆಗಳ ವಿಲೀನ ಬಿಡಿ; ಶಿಕ್ಷಕರನ್ನು ನೇಮಿಸಿ   

ವಿಜಾಪುರ: ರಾಜ್ಯದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚದಿರಲು ಹಾಗೂ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ  ಎಐಡಿವೈಓ ಸಂಘಟನೆಯ ನೇತೃತ್ವದಲ್ಲಿ ನಿರುದ್ಯೋಗಿ ಶಿಕ್ಷಕ ಅಭ್ಯರ್ಥಿಗಳು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿಯ ಗಾಂಧಿವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಸಾವಿರಾರು ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಿ ಪ್ರತಿ ಮಗುವಿಗೂ ಶಿಕ್ಷಣ ನೀಡುವುದು ಆ ಮೂಲಕ ಹೆಚ್ಚು ಹೆಚ್ಚು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕಾದ ಸರ್ಕಾರವೇ ಶಾಲೆಗಳನ್ನು ಮುಚ್ಚಲು ಇಲ್ಲವೆ ವಿಲೀನಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಎಐಡಿಎಸ್‌ಓ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎನ್. ರಾಜಶೇಖರ ಹೇಳಿದರು.

 ನಿವೃತ್ತ ಪ್ರಾಚಾರ್ಯ ವಿ.ಎಲ್. ಚನಾಳ, ಸರ್ಕಾರ ಶಿಕ್ಷಣವನ್ನೂ ಖಾಸಗೀಕರಣಗೊಳಿಸಿ ದುಬಾರಿಮಾಡುತ್ತಿದೆ ಎಂದು ಆಪಾದಿಸಿದರು. ಶಿಕ್ಷಕರ ಸಂಘಟನೆ ಡಿಟಿಓ ರಾಜ್ಯ ಸಂಚಾಲಕ ಬಿ. ಭಗವಾನ್ ರೆಡ್ಡಿ, ಮಠಗಳಿಗೆ, ಅನವಶ್ಯಕ ಸಭೆ- ಸಮಾರಂಭಗಳಿಗೆ ಮಾಡುತ್ತಿರುವ ದುಂದುವೆಚ್ಚ ನಿಲ್ಲಿಸಬೇಕು. ಶಿಕ್ಷಕರ ವೇತನವೇ ಹೊರೆ ಎಂಬಂತೆ ಶಾಲೆಗಳನ್ನು ಮುಚ್ಚುತ್ತಿರುವುದು ಸರಿಯಲ್ಲ ಎಂದರು.

ಎಐಡಿವೈಓ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗ ಬಾಗೇವಾಡಿ, ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಿಗೆ ಏಕಕಾಲದಲ್ಲಿ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಸಚಿವ ವರ್ತೂರು ಪ್ರಕಾಶ್‌ಗೆ ಮನವಿ ಸಲ್ಲಿಸಿದರು. ಬಾಳು ಜೇವೂರ, ಉಮೇಶ ಬಿ.ಆರ್, ಭೀಮು ಉಪ್ಪಾರ, ಅರುಣ, ಮುಬಾರಕ, ಆನಂದ, ನಿಂಗು, ಭಾಸ್ಕರ್ ರೆಡ್ಡಿ, ರಾಜೇಶ್, ಸಿದ್ದರಾಮ, ಮಲ್ಲು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.