ADVERTISEMENT

ಸಾಕ್ಷರತೆಯಿಂದ ವ್ಯಕ್ತಿತ್ವ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 4:30 IST
Last Updated 14 ಸೆಪ್ಟೆಂಬರ್ 2011, 4:30 IST

ವಿಜಾಪುರ: ಸಾಕ್ಷರತೆ ಇಲ್ಲದೆ ಹೋದರೆ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ. ವ್ಯಕ್ತಿಯ ಅಭಿವೃದ್ಧಿಯಲ್ಲಿ ಶಿಕ್ಷಣವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ ಹೇಳಿದರು.

ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಕ್ಷರತಾ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸಾಕ್ಷರತೆ ಪ್ರತಿ ವ್ಯಕ್ತಿಯ ಬದುಕಿನ ಬದಲಾವಣೆಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಅಕ್ಷರ ಜ್ಞಾನವಿಲ್ಲದ ಮನುಷ್ಯ ಶೋಷಣೆಗೆ ಒಳಗಾಗುತ್ತಾನೆ. ಬದುಕು ಅಂಧಕಾರವಾಗುತ್ತದೆ. ಬೆಳೆಯುತ್ತಿರುವ ಸಮಾಜದಲ್ಲಿ ಪ್ರತಿ ವ್ಯಕ್ತಿಯೂ ವಿದ್ಯಾವಂತನಾಗುವುದು ಅಗತ್ಯವಾಗಿದೆ. ಶಾಲಾ ಶಿಕ್ಷಣದಿಂದ ವಂಚಿತರಾದ ಜನರಿಗಾಗಿ ರೂಪಿಸಿರುವ ಸಾಕ್ಷರ ಭಾರತ ಕಾರ್ಯಕ್ರಮದಡಿ ಎಲ್ಲರೂ ಅಕ್ಷರಸ್ಥರಾಗಬೇಕು ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಸಾಕ್ಷರತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸಾಕ್ಷರತೆಯ ಗುರಿ ಸಾಧಿಸುವಲ್ಲಿ ಯಶಸ್ಸು ಕಂಡಿಲ್ಲ ಎಂದರು.

ಸಾಕ್ಷರತಾ ಪ್ರಮಾಣದಲ್ಲಿ ವಿಜಾಪುರ ಜಿಲ್ಲೆ ರಾಜ್ಯದಲ್ಲಿ 26ನೇ ಸ್ಥಾನಲ್ಲಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಅನಕ್ಷರತೆಯ ಕಾರಣದಿಂದ ಬಡತನ, ಜೀತ ಪದ್ಧತಿ, ಬಾಲ್ಯ ವಿವಾಹ ಜಿಲ್ಲೆಯಲ್ಲಿ ಇನ್ನೂ ಮುಂದುವರೆದಿವೆ. ಜನರು ಎಲ್ಲಿಯವರೆಗೂ ಅಕ್ಷರ ಜ್ಞಾನದಿಂದ ವಂಚಿತರಾಗುತ್ತಾರೊ ಅಲ್ಲಿಯವರೆಗೆ ಇಂತಹ ಅನಿಷ್ಠ ಪದ್ಧತಿಯಿಂದ ಬಂಧಮುಕ್ತ ರಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಅಕ್ಷರ ಕಲಿಯಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕೆಂದು ಎಂದು ಕರೆ ನೀಡಿದರು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಜಿ.ಪಂ. ಸಿಇಓ ಎ.ಎನ್ ಪಾಟೀಲ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜೆ.ಎಸ್. ಪೂಜಾರ, ಮಹಿಳಾ ವಿವಿ ಕುಲಸಚಿವ ಪ್ರೊ. ಜಿ.ಆರ್. ನಾಯಕ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಆರ್. ಸುನಂದಮ್ಮ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಎಂ. ಚೌರ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.