ಬಸವನಬಾಗೇವಾಡಿ: ‘ಜಾನಪದ ಕಲೆಯು ನಮ್ಮ ಹಿರಿಯರು ಬಿಟ್ಟು ಹೋಗಿರುವ ಶ್ರೇಷ್ಠ ಕಲೆಯಾಗಿದೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ’ ಎಂದು ಹೆಸ್ಕಾಂ ಇಲಾಖೆಯ ಲೆಕ್ಕಪರಿಶೋಧನಾಧಿಕಾರಿ ಎಸ್.ಡಿ. ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಕಣಕಾಲ ಗ್ರಾಮದ ನ್ಯೂ ಹೈಸ್ಕೂಲ್ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಈಚೆಗೆ ಹಮ್ಮಿಕೊಂಡಿದ್ದ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದು ಅಧುನಿಕ ಭರಾಟೆಯಲ್ಲಿ ನಾವು ಪೂರ್ವಜರ ಜಾನಪದ ಕಲೆ ಯನ್ನು ಮರೆಯುತ್ತಿದ್ದೆವೆ. ಉತ್ತರ ಕರ್ನಾಟಕದ ಜಾನಪದದ ಸೊಗಡು ಬೇರೆ ಯಾವ ಭಾಷೆಯಲ್ಲೂ ಇಲ್ಲ. ಮರೆಯಾಗುತ್ತಿರುವ ಹಂತಿಪದ, ಜೋಗುಳ ಪದ, ಗೀಗಿ ಪದಗಳು ಸೇರಿದಂತೆ ವಿವಿಧ ಜಾನಪದ ಕಲೆಗಳ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕಾದ ಅಗತ್ಯತೆ ಇದೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಕೆ.ದಿನ್ನಿ, ‘ದೂರದರ್ಶನ, ಮೊಬೈಲ್ಗಳ ಅಬ್ಬರದಲ್ಲಿ ಜಾನಪದ ಕಲೆಯ ಮಹತ್ವವನ್ನು ಮರೆಯು
ತ್ತಿದ್ದೇವೆ. ಜಾನಪದಲ್ಲಿ ಸತ್ವಯುತವಾದ ಪದಗಳಿವೆ. ಅವುಗಳ ಮಹತ್ವ ಅರಿಯಬೇಕು’ ಎಂದು ಹೇಳಿದರು.
ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ, ವೈ.ಎಸ್.ಗಂಗಶೆಟ್ಟಿ, ಎಸ್.ಐ. ಬಿರಾದಾರ ಮಾತನಾಡಿದರು. ಎನ್.ಎಸ್.ಹೂಗಾರ, ನಾಗೇಶ ನಾಗೂರ ವೇದಿಕೆಯಲ್ಲಿದ್ದರು. ಚನ್ನಮ್ಮ ಈಳಗೇರ ಹಾಗೂ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಎಸ್.ಆರ್. ಮಠ ಸ್ವಾಗತಿಸಿದರು, ಬಿ.ಎಚ್. ಬಾಗವಾನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮಾನಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.