ಹೊಸಪೇಟೆ (ವಿಜಯನಗರ): ಜಿಲ್ಲೆಯ ಹೂವಿನಹಡಗಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ವಿ. ಪರಮೇಶ್ವರಪ್ಪ ಅವರ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದವರು (ಎಸಿಬಿ) ಶುಕ್ರವಾರ ದಾಳಿ ನಡೆಸಿದರು.
ಪರಮೇಶ್ವರಪ್ಪನವರ ಹಗರಿಬೊಮ್ಮನಹಳ್ಳಿಯ ಹೌಸಿಂಗ್ ಬೋರ್ಡ್ ಕಾಲೊನಿಯ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಬೆಂಗಳೂರಿನ ನೆಲಮಂಗಲದಲ್ಲಿರುವ ನಿವೇಶನ, ಚಿತ್ರದುರ್ಗದಲ್ಲಿ ಮೂರು ಮಹಡಿಯ ಮನೆ, ಕೂಡ್ಲಿಗಿಯಲ್ಲಿ ಮನೆ ಹಾಗೂ ನಿವೇಶನ ಹೊಂದಿರುವ ದಾಖಲೆಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಚಿನ್ನಾಭರಣಗಳ ನಿಖರ ಮಾಹಿತಿ ಲಭ್ಯವಾಗಿಲ್ಲ.
ಕೂಡ್ಲಿಗಿ–ಸಂಡೂರು ಉಪವಿಭಾಗದ ಪ್ರಭಾರ ಸಹಾಯಕ ಎಂಜಿನಿಯರ್ ಕೂಡ ಪರಮೇಶ್ವರಪ್ಪ ಆಗಿದ್ದಾರೆ. ಕೂಡ್ಲಿಗಿಯ ನೀರಾವರಿ ಇಲಾಖೆಯ ಕಚೇರಿಯಲ್ಲಿ ಪರಮೇಶ್ವರಪ್ಪ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿಯವರು ಜಾಲಾಡಿದ್ದಾರೆ. ಪಟ್ಟಣದ ಕೆಎಚ್ಬಿ ಕಾಲೊನಿಯಲ್ಲಿ ಅವರ ಮನೆ ಗುರುತಿಸಿ ಹೋಗಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಬಳ್ಳಾರಿ ಡಿವೈಎಸ್ಪಿ ವಿ. ಸೂರ್ಯನಾರಾಯಣರಾವ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಿಬ್ಬಂದಿ ಸತೀಶ್, ವಸಂತ, ದಿವಾಕರ, ಪ್ರಕಾಶ್, ಗೋವಿಂದ ಇದ್ದರು. ಕೂಡ್ಲಿಗಿಯಲ್ಲಿ ಎಸಿಬಿ ಇನ್ಸ್ಪೆಕ್ಟರ್ ಸುಂದರೇಶ ಬಿ. ಹೊಳೆಣ್ಣನವರ್ ನೇತೃತ್ವದ ತಂಡ ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.