
ಆಲಮೇಲ: ‘ನೂತನ ತಾಲ್ಲೂಕು ಕೇಂದ್ರದಲ್ಲಿ ಅಭಿವೃದ್ದಿ ಪರ್ವ ಶುರುವಾಗಿದ್ದು, ಪ್ರಜಾಸೌಧ ಸೇರಿದಂತೆ ಹತ್ತಾರು ಕಾಮಗಾರಿಗಳು ಪಟ್ಟಣಕ್ಕೆ ಕಳೆ ತರಲಿವೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಆವರಣದಲ್ಲಿ ಕಂದಾಯ ಇಲಾಖೆಯು ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಮ್ಮ ನಡೆ ಅಭಿವೃದ್ಧಿ ಕಡೆ’ ಎಂಬ ಘೋಷಣೆಯಂತೆ ಈಗಾಗಲೇ ನಾಲ್ಕು ಕೆಲಸಗಳು ಪ್ರಗತಿಯಲ್ಲಿವೆ. 3 ಎಕರೆ 3 ಗುಂಟೆಯಲ್ಲಿ ಪ್ರಜಾಸೌಧ ಕಟ್ಟಡವು ಸುಮಾರು ₹8.60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 1 ಎಕರೆಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಹಾಗೂ 6 ಎಕರೆ 20 ಗುಂಟೆಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ತಲಾ ₹3 ಕೋಟಿ ಮಂಜೂರಾಗಿದೆ’ ಎಂದರು.
‘ಮತಕ್ಷೇತ್ರದಲ್ಲಿ 10 ಕಿ.ಮೀಯಷ್ಟೂ ಡಾಂಬರೀಕರಣ ಮಾಡಿಲ್ಲವೆಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದ್ದಾರೆ. ಅವರು ಎಲ್ಲೇ ಕರೆದರೂ, ಬಹಿರಂಗ ಚರ್ಚೆಗೆ ನಾನು ಸಿದ್ಧ. ಕೆಲಸ ಮಾಡಿದ್ದನ್ನು ತೋರಿಸುತ್ತೇನೆ’ ಎಂದು ತಿಳಿಸಿದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ‘ಆಲಮೇಲವು ಅಭಿವೃದ್ಧಿ ಕಡೆಗೆ ದಾಪುಗಾಲು ಹಾಕುತ್ತಿರುವುದು ಸಂತೋಷದ ವಿಷಯ’ ಎಂದು ಹೇಳಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರು ಮಾತನಾಡಿದರು. ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಕೊಳಾರಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಶ್ರೀಶೈಲ ಮಠಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.