ADVERTISEMENT

ಶಾಸಕರ ಎದುರು ವಾಗ್ವಾದ; ಹಾಲಿಹಾಳ ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:17 IST
Last Updated 19 ಜನವರಿ 2022, 15:17 IST

ವಿಜಯಪುರ: ಶಾಸಕ ಸೋಮನಗೌಡ ಪಾಟೀಲ ಎದುರು ಪಕ್ಷದ ಮುಖಂಡರೊಂದಿಗೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸಲು ಮುಂದಾಗಿದ್ದ ದೇವರಹಿಪ್ಪರಗಿ ಬಿಜೆಪಿ ಮಂಡಲ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಮುತ್ತುರಾಜ ಹಾಲಿಹಾಳ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ ತಿಳಿಸಿದ್ದಾರೆ.

ಹಾಲಿಹಾಳ ಅವರು ವಿಧಾನ ಪರಿಷತ್‌ ಚುನಾವಣೆಯಲ್ಲಿ ವಿರೋಧ ಪಕ್ಷದವರೊಂದಿಗೆ ಸೇರಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು.ಅಲ್ಲದೇ, ಬಿಜೆಪಿ ಪ್ರಮುಖರೊಂದಿಗೆ ಅಗೌರವವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನೆಲ್ಲ ಪರಿಗಣಿಸಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇನ್ನು ಮುಂದೆ ನಮ್ಮ ಪಕ್ಷಕ್ಕೂ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಾಗ್ವಾದ:

ಬಸವನ ಬಾಗೇವಾಡಿ ತಾಲ್ಲೂಕಿನ ಕರಭಂಟನಾಳ ಗ್ರಾಮದಲ್ಲಿ ಮಂಗಳವಾರ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಹಾಲಿಹಾಳ ಅವರು ‘ನನ್ನನ್ನು ಭೂಮಿಪೂಜೆಗೆ ಏಕೆ ಕರೆದಿಲ್ಲ, ನನ್ನ ಫೋನ್ ಕರೆಯನ್ನು ಶಾಸಕರು ಏಕೆ ಸ್ವೀಕರಿಸಿಲ್ಲ’ ಎಂದು ತಗಾದೆ ತೆಗೆದು ಶಾಸಕರು ಹಾಗೂ ಬಿಜೆಪಿ ಮುಖಂಡರೊಂದಿಗೆ ವಾಗ್ವಾದ ನಡೆಸಿದ್ದರು.

ಈ ಸಂದರ್ಭದಲ್ಲಿ ತಕ್ಷಣವೇ ಮಧ್ಯೆ ಪ್ರವೇಶಿಸಿದ್ದ ಶಾಸಕರು ‘ನಾನು ಯಾರ ಕರೆಯನ್ನು ನಿರ್ಲಕ್ಷಿಸಿಲ್ಲ. ಯಾವುದೇ ಸಭೆ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನೀವು ಕರೆ ಮಾಡಿರಬಹುದು. ಜೊತೆಗೆ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಿರುತ್ತದೆ. ಈವರೆಗೆ ನಾನು ಯಾವುದೇ ಕಾರ್ಯಕರ್ತರನ್ನು ನಿರ್ಲಕ್ಷಿಸಿಲ್ಲ. ಈ ಕುರಿತು ತಪ್ಪು ಗ್ರಹಿಕೆ ಬೇಡ’ ಎಂದು ಸಮಾದಾನ ಪಡಿಸಿದ್ದರು. ಹಾಲಿಹಾಳ ಅವರ ಉಚ್ಛಾಟನೆಗೆ ಈ ಘಟನೆಯೇ ಮುಖ್ಯ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.