ವಿಜಯಪುರ: ಖ್ಯಾತ ಮಧುಮೇಹ, ಹೃದ್ರೋಗ ತಜ್ಞರಾದ ಡಾ.ಬಾಬುರಾಜೇಂದ್ರ ಬಿ.ನಾಯಿಕ ಅವರನ್ನು ವಿಜಯಪುರ ಜಿಲ್ಲಾ ಬಿಜೆಪಿ ಘಟಕದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
‘ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಲು ಆದ್ಯತೆ ನೀಡಲಾಗುವುದು’ ಎಂದು ಡಾ.ಬಾಬು ರಾಜೇಂದ್ರ ನಾಯಿಕ ತಿಳಿಸಿದ್ದಾರೆ.
ಮೂಲತಃ ನಿಡಗುಂದಿ ತಾಲ್ಲೂಕಿನ ಗಣಿ ಎಲ್.ಟಿ ಗ್ರಾಮದರಾದ ಇವರು, ವಿಜಯಪುರ–ಬಾಗಲಕೋಟೆಯಲ್ಲಿ ಶ್ರೀತುಳಸಿಗಿರೀಶ ಮಧುಮೇಹ, ಹೃದ್ರೋಗ ಆಸ್ಪತ್ರೆಯನ್ನು ತೆರೆದು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ.
ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಅವರು, 68ಕ್ಕೂ ಅಧಿಕ ಮಧುಮೇಹಿ ಮಕ್ಕಳನ್ನು(ಟೈಪ್ ಒನ್ ಡಯಾಬೆಟಿಕ್) ದತ್ತು ಪಡೆದು, ಉಚಿತ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.ಗೋ ಸೇವೆ, ರಕ್ತದಾನ ಶಿಬಿರ, ಮಧುಮೇಹ ಶಿಬಿರ, ಸ್ವಚ್ಛತಾ ಶಿಬಿರ ಆಯೋಜಿಸುವ ಮೂಲಕ ಗಮನಸೆಳೆದಿದ್ದಾರೆ.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(2012) ಮತ್ತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ(2014) ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಬಾಗಲಕೋಟೆ ಜಿಲ್ಲಾಡಳಿತವು ರಾಜ್ಯೋತ್ಸವ(2014) ಪ್ರಶಸ್ತಿ ನೀಡಿ ಗೌರವಿಸಿದೆ.
ವಿಧಾನ ಪರಿಷತ್ವಾಯವ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ(2016) ಅಭ್ಯರ್ಥಿಯಾಗಿ ಈ ಹಿಂದೆ ಅವರು ಸ್ಪರ್ಧಿಸಿ, ತೀವ್ರ ಪೈಪೋಟಿ ನೀಡಿದ್ದರು.
ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯದರ್ಶಿಯಾಗಿದೆ ಸಮಾಜದ ಸಂಘಟನೆಗೆ ಶ್ರಮಿಸಿದ್ದಾರೆ. ಅಲ್ಲದೇ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.